ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ನವೆಂಬರ್ 2021
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಪ್ರಾಣಿಯ ಆಗಮನವಾಗಿದೆ. ಮೈಸೂರು ಮತ್ತು ಬನ್ನೇರುಘಟ್ಟ ಬಿಟ್ಟರೆ ಇದೆ ಮೊದಲ ಭಾರಿಗೆ ರಾಜ್ಯದ ಮತ್ತೊಂದು ಮೃಗಾಲಯದಲ್ಲಿ ಈ ಪ್ರಾಣಿ ಕಾಣಿಸಿಕೊಳ್ಳುತ್ತಿದೆ. ಮೈಸೂರು ಮೃಗಾಲಯದಿಂದ ಈ ಪ್ರಾಣಿಯನ್ನು ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ಉಡುಗೊರೆ ನೀಡಲಾಗಿದೆ.
ಮೈಸೂರು ಮೃಗಾಲಯದಿಂದ ನೀರು ಕುದುರೆಯನ್ನು (ಹಿಪೊಪೋಟಮಸ್) ಉಡುಗೊರೆಯಾಗಿ ನೀಡಲಾಗಿದೆ. ಗಂಡು ನೀರು ಕುದುರೆ ಸಿಂಹಧಾಮದ ವಾತಾವರಣಕ್ಕೆ ಹೊಂದಿಕೊಂಡಿದ್ದು, ಪ್ರವಾಸಿಗರು ಇನ್ಮುಂದೆ ಇದರ ದರ್ಶನ ಪಡೆಯಬಹುದಾಗಿದೆ.
ನೀರು ಕುದುರೆಯಿಂದ ಹೊಸ ಹುರುಪು
ಮೈಸೂರು ಮತ್ತು ಬನ್ನೇರುಘಟ್ಟದಲ್ಲಿ ಮಾತ್ರವೇ ನೀರು ಕುದುರೆ ಇದೆ. ಅಲ್ಲಿಯ ವಾತಾವರಣಕ್ಕೆ ಅವು ಹೊಂದಿಕೊಂಡಿವೆ. ಸಂತಾನೋತ್ಪತ್ತಿಯೂ ನಡೆಯುತ್ತಿದೆ.
ಇವೆರಡು ಕಡೆ ಹೊರತು ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಯಾವುದೆ ಮೃಗಾಲಯಗಳಲ್ಲೂ ನೀರು ಕುದುರೆ ಇಲ್ಲ. ಈಗ ಶಿವಮೊಗ್ಗಕ್ಕೆ ನೀರು ಕುದುರೆ ಬಂದಿರುವುದು ಹೊಸ ಪ್ರಯತ್ನವಾಗಿದೆ.
ಆಫ್ರಿಕಾ ಮೂಲದ ಈ ಪ್ರಾಣಿ ಸಾಮಾನ್ಯವಾಗಿ ನೀರು, ಕೆಸರು ಇರುವ ಜಾಗದಲ್ಲಿ ಇರಲಿದೆ. ಅದೇ ಮಾದರಿಯ ವಾತಾವರಣವನ್ನು ಇಲ್ಲಿಯೂ ನಿರ್ಮಿಸಲಾಗಿದೆ ಎಂದು ಹುಲಿ ಮತ್ತು ಸಿಂಹಧಾಮದ ಎಸಿಎಫ್ ಮುಕುಂದ ಚಂದ್ರ ತಿಳಿಸಿದ್ದಾರೆ.
ಮೂರೂವರೆ ವರ್ಷದ ದಿಯಾ ಎಂಬ ಗಂಡು ನೀರು ಕುದುರೆಗೆ ಜೋಡಿಯಾಗಿ ಹೆಣ್ಣು ನೀರು ಕುದುರೆಯನ್ನು ತರಿಸುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಇದಕ್ಕೆ ಜೋಡಿ ಸಿಕ್ಕರೆ ಇಲ್ಲಿಯೇ ಸಂತಾನ್ನೋತ್ಪತ್ತಿಯಾಗಲಿದೆ.
ವಿಚಾರ ತಿಳಿಯುತ್ತಿದ್ದಂತೆ ನೀರು ಕುದುರೆ ನೋಡಲು ಪ್ರವಾಸಿಗರು ಉತ್ಸುಕತೆ ತೋರುತ್ತಿದ್ದಾರೆ. ಮಕ್ಕಳು ಈ ಪ್ರಾಣಿಯನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ.