SHIVAMOGGA LIVE NEWS | 29 ಮಾರ್ಚ್ 2022
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಾಗವನ್ನು ಅರಣ್ಯ ಇಲಾಖೆಯಿಂದ ಕೈ ಬಿಡಬೇಕು. ಅಲ್ಲದೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಆಲ್ಕೊಳದಿಂದ ಪಾದಯಾತ್ರೆ
ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದ ಆಲ್ಕೊಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆಲ್ಕೊಳದಿಂದ ಸಾಗರ ರಸ್ತೆ ಮೂಲಕ ಬಸ್ ನಿಲ್ದಾಣ. ಬಿ.ಹೆಚ್.ರಸ್ತೆ ಮೂಲಕ ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಹತ್ತು ಮಾನದಂಡಗಳು
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಹತ್ತು ಮಾನದಂಡಗಳನ್ನು ಸಿದ್ಧಪಡಿಸಲಾಗಿತ್ತು. ಅದರಂತೆ ಸರ್ಕಾರವು ನಿರಾಶ್ರಿತ ಕುಟುಂಬಗಳಿಗೆ 60 ಸಾವಿರ ಎಕರೆ ಜಮೀನನ್ನು ನೀಡಬೇಕಿತ್ತು. ಈ ಪೈಕಿ 15 ಸವಿರ ಎಕರೆಯನ್ನು ಡಿನೋಟಿಫೈ ಮಾಡಲಾಗಿತ್ತು. ಕೆಲವು ಜಾಗವನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ. ಅದನ್ನು ಬಿಡಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಾಧಿಕಾರ ರಚನೆಗೆ ಒತ್ತಾಯ
ಶರಾವತಿ ಮುಳುಗಡೆ ಸಂತ್ರಸ್ತರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. 1959ರ ನಿರ್ಣಯಗಳನ್ನು ಅನುಷ್ಟಾನಗೊಳಿಸಬೇಕು. ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಖಾತೆ ಜಮೀನಿಗೆ ಪೋಡಿ ದುರಸ್ತಿ ಮಾಡಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ ಆಗ್ರಹಿಸಿತು.
15 ದಿನದ ಗಡುವು
ಶರಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ತರಿಗೆ ಇನ್ನು 15 ದಿನದಲ್ಲಿ ಭೂಮಿ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಶರಾವತಿ ಮಹಾ ವಿದ್ಯುದಾಗಾರಕ್ಕೆ ಮುತ್ತಿಗೆ ಹಾಕಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
‘ಮೌನಕ್ರಾಂತಿ ಮಹಾಕ್ರಾಂತಿ ಆಗಲು ಬಿಡಬೇಡಿ’
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿಟ್ಟೂರಿನ ಶ್ರೀ ನಾರಾಯಣ ಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ‘ಸಂತ್ರಸ್ತ ರೈತರಿಗೆ ಭೂಮಿ ಹಕ್ಕು ಕೊಡದಿರುವುದು ದುರ್ದೈವ. ಸರ್ಕಾರ, ಜನಪ್ರತಿನಿಧಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ರೈತರಿಗೆ ನ್ಯಾಯ ಒದಗಿಸಬೇಕು. ರೈತರ ಕಿಚ್ಚು ಒಳ್ಳೆಯದಲ್ಲ. ಸಾಮಾನ್ಯ ಬೆಂಕಿ ಕಡ್ಡಿ ಇಡೀ ಬೊಣವೆಯನ್ನೆ ಸುಡುತ್ತದೆ. ಹಾಗೆ ಬಡವನ ಮೌನಕ್ರಾಂತಿ ಮಹಾಕ್ರಾಂತಿ ಆಗಲು ಅವಕಾಶ ಕೊಡಬೇಡಿ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ, ಪ್ರಮುಖರಾದ ತೀ.ನಾ.ಶ್ರೀನಿವಾಸ್, ಮುಳುಗಡೆ ರೈತರಾದ ಹೂವಪ್ಪ, ಗಣಪತಿ, ಅಶೋಕ್ ಕೆ.ಎನ್, ಕೇಶವ, ರಾಜೇಂದ್ರ, ರಘುಪತಿ, ಶಿವಾನಂದ್, ಮಂಜಪ್ಪ ಸಂಕಲಪುರ, ನಾಗರಾಜ್ ಎಂ.ಡಿ, ಕೆ.ಸುರೇಶ್, ರಾಘವೇಂದ್ರ, ಗೋವಿಂದಪ್ಪ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಎರಡು ವರ್ಷದ ಮನೆ ಮಾರಾಟಕ್ಕಿದೆ. GROUND FLOOR 2BHK, 1st FLOOR 1 BHK (ಎರಡು ಮನೆಗಳು), 2nd FLOOR BACHELOR ROOM WITH ATTACHED BATHROOM. ವಿಳಾಸ : ತರಳಬಾಳು ಲೇಔಟ್ ಪಕ್ಕ, ತಾವರೆಚಟ್ನಹಳ್ಳಿ, ಪೇಸ್ ಕಾಲೇಜು ಹತ್ತಿರ. ಹೊನ್ನಾಳಿ ರಸ್ತೆ, ಶಿವಮೊಗ್ಗ. ಹೆಚ್ಚಿನ ಮಾಹಿತಿಗೆ : 9972194422 ಜಾಹೀರಾತು
ಶಿವಮೊಗ್ಗದಲ್ಲಿ ಮನೆ ಮಾರಾಟಕ್ಕಿದೆ