SHIVAMOGGA LIVE NEWS
ಶಿವಮೊಗ್ಗ| ನಗರದಲ್ಲಿ ಮತ್ತೆ ಸಾವರ್ಕರ್ ಫೋಟೊ ವಿವಾದ ಭುಗಿಲೆದ್ದಿದೆ. ಕಿಡಿಗೇಡಿಗಳು ಸರ್ಕಲ್’ನಲ್ಲಿ ಕಟ್ಟಿದ್ದ ಫ್ಲೆಕ್ಸ್ ತೆಗೆದಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಅಮೀರ್ ಅಹಮದ್ ಸರ್ಕಲ್’ನಲ್ಲಿ ವಿ.ಡಿ.ಸಾವರ್ಕರ್ ಅವರ ಫೋಟೊ ಕಟ್ಟಲಾಗಿತ್ತು. ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ಸಾವರ್ಕರ್ ಫೋಟೊ ಕಟ್ಟಿರುವ ಜಾಗದಲ್ಲಿ ಟಿಪ್ಪು ಸುಲ್ತಾನ್ ಫೋಟೊ ಹಾಕಲು ಮುಂದಾಯಿತು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ.
ಫೋಟೊ ಕಿತ್ತವರಿಗೆ ಲಾಠಿ ಏಟು
ಅಮೀರ್ ಅಹಮದ್ ಸರ್ಕಲ್’ನಲ್ಲಿ ವಿ.ಡಿ.ಸಾವರ್ಕರ್ ಅವರ ಫ್ಲೆಕ್ಸ್ ಇದ್ದಲ್ಲಿ ಟಿಪ್ಪು ಸುಲ್ತಾನ್ ಅವರ ಫೋಟೊ ಕಟ್ಟಲು ಮುಸ್ಲಿಂ ಸಮುದಾಯದ ಯುವಕರು ಮುಂದಾಗಿದ್ದಾರೆ. ಪೊಲೀಸರು ಯುವಕರನ್ನು ತಡೆದಿದ್ದಾರೆ. ಈ ವೇಳೆ ಸರ್ಕಲ್’ಗೆ ನುಗ್ಗಿದ ಕಿಡಿಗೇಡಿಗಳು ವಿ.ಡಿ.ಸಾವರ್ಕರ್ ಅವರ ಫ್ಲೆಕ್ಸ್ ತೆರವು ಮಾಡಿದ್ದಾರೆ. ಕೂಡಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಫ್ಲೆಕ್ಸ್ ಕಿತ್ತವರನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೆ ಫ್ಲೆಕ್ಸ್ ಕಟ್ಟುವ ಯತ್ನ
ಇತ್ತ ವಿ.ಡಿ.ಸಾವರ್ಕರ್ ಫೋಟೋ ತೆಗೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಲ್’ನಲ್ಲೆ ಫ್ಲೆಕ್ಸ್ ಕಟ್ಟಬೇಕು ಎಂದು ಪಟ್ಟು ಹಿಡಿದರು. ಆದರೆ ಇದಕ್ಕೆ ಪೊಲೀಸರು ಅವಕಾಶ ಕೊಡದಿದ್ದಾಗ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಸಾವರ್ಕರ್ ಫ್ಲೆಕ್ಸನ್ನು ಪೊಲೀಸರು ವಶಕ್ಕೆ ಪಡೆದರು. ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ಅಮೀರ್ ಅಹಮದ್ ಸರ್ಕಲ್’ನಲ್ಲಿ ಧರಣಿ ಆರಂಭಿಸಿದರು.
ಸದ್ಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.