SHIVAMOGGA LIVE NEWS | 15 MAY 2023
SHIMOGA : ವಿಧಾನಸಭೆ ಚುನಾವಣೆ ಫಲಿತಾಂಶ (Election Result) ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಾರಮ್ಯ ಮೆರೆದಿವೆ. ಜೆಡಿಎಸ್ ಪಕ್ಷ ಕೂಡ ತನ್ನ ಇರುವಿಕೆಯನ್ನು ಸೂಚಿಸಿದೆ. ಈ ಫಲಿತಾಂಶದಲ್ಲಿ ಗಮನಿಸಬೇಕಾದ ವಿಚಾರಗಳು ಇಲ್ಲಿವೆ.
ಪ್ರಮುಖಾಂಶ 1 : ಈ ಬಾರಿ ಇಬ್ಬರು ಹೊಸಬರು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ, ಶಿಕಾರಿಪುರ ಕ್ಷೇತ್ರದ ಬಿ.ವೈ.ವಿಜಯೇಂದ್ರ ಇದೇ ಮೊದಲು ವಿಧಾನಸಭೆಗೆ ತೆರಳುತ್ತಿದ್ದಾರೆ. ಇಬ್ಬರು ಒಂದೇ ಪಕ್ಷದವರು ಎಂಬುದು ವಿಶೇಷ.
ಇದನ್ನೂ ಓದಿ – ಜನ, ಜನಪ್ರತಿನಿಧಿಗಳು, ಮೆಗ್ಗಾನ್ ಸಿಬ್ಬಂದಿ, ಪೊಲೀಸರಿಂದಾಗಿ ಉಳಿಯಿತು ಹಲವರ ಪ್ರಾಣ, ಸಿಕ್ತು ಸೂಕ್ತ ಚಿಕಿತ್ಸೆ, ಹೇಗದು?
ಪ್ರಮುಖಾಂಶ 2 : ಮೂವರು ಮಾಜಿಗಳಿಗೆ ಮತ್ತೆ ವಿಧಾನಸಭೆಯಲ್ಲಿ ಕೂರುವ ಅವಕಾಶ ಲಭಿಸಿದೆ. ಶಿವಮೊಗ್ಗ ಗ್ರಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ್, ಸೊರಬದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ, ಸಾಗರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರು ಪುನಃ ವಿಧಾನಸಭೆಗೆ ತೆರಳುತ್ತಿದ್ದಾರೆ.
ಪ್ರಮುಖಾಂಶ 3 : ಈ ಬಾರಿ ಘಟನುಘಟಿಗಳು ಇಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಕಾಗೋಡು ತಿಮ್ಮಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೋಲನುಭವಿಸಿದ್ದಾರೆ. ಪುನರಾಯ್ಕೆ ಆಗಿರುವ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ, ಭದ್ರಾವತಿಯ ಬಿ.ಕೆ.ಸಂಗಮೇಶ್ವರ ಅವರೆ ಈ ಬಾರಿ ಜಿಲ್ಲೆಯ ಸೀನಿಯರ್ ಶಾಸಕರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಪ್ರಮುಖಾಂಶ 4 : ಗೆದ್ದ ಅಭ್ಯರ್ಥಿಗಳ (Election Result) ಪೈಕಿ ಹಲವರಿಗೆ ಗೆಲುವು ಸುಲಭದ್ದಾಗಿರಲಿಲ್ಲ. ಸ್ವಲ್ಪ ಮೈಮರೆತಿದ್ದರು ಸೋಲಾಗುವ ಭೀತಿ ಇತ್ತು. ಭದ್ರಾವತಿಯಲ್ಲಿ ಬಿ.ಕೆ.ಸಂಗಮೇಶ್ವರ್ ಮತ್ತು ಶಾರದಾ ಅಪ್ಪಾಜಿ ಅವರ ಮಧ್ಯೆ ಟೈಟ್ ಫೈಟ್ ಇತ್ತು. ಶೇ.1.74ರಷ್ಟು ಮತಗಳ ಅಂತರದಲ್ಲಿ ಸಂಗಮೇಶ್ವರ್ ಅವರು ಗೆದ್ದಿದ್ದಾರೆ. ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ 81,810 ಮತಗಳು, ಪಕ್ಷೇತರ ಅಭ್ಯರ್ಥಿ ಎಸ್.ಪಿ.ನಾಗನಗೌಡ 70,802 ಮತಗಳನ್ನು ಪಡೆದಿದ್ದಾರೆ. ಇಬ್ಬರ ಮಧ್ಯೆ ಜಿದ್ದಾಜಿದ್ದಿ ಇತ್ತು. ಬಿಜೆಪಿ ಪಾಳಯ ಸ್ವಲ್ಪ ವಿರಮಿಸಿದ್ದರು ಅಂತರ ಕಡಿಮೆ ಅಥವಾ ಫಲಿತಾಂಶ ತಲೆ ಕೆಳಗಾಗುವ ಸಾಧ್ಯತೆ ಇತ್ತು. ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರದಲ್ಲಿಯು ಇದೇ ರೀತಿ ಹಣಾಹಣಿ ಇತ್ತು.
ಪ್ರಮುಖಾಂಶ 5 : ಹರಸಾಹಸ ಪಟ್ಟು ಹಲವರು ಈ ಬಾರಿ ವಿವಿಧ ಪಕ್ಷಗಳಿಂದ ಟಿಕೆಟ್ ಪಡೆದಿದ್ದರು. ಪ್ರತಿಷ್ಠೆಯನ್ನ ಪಣಕ್ಕಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರ ರಾಜಕೀಯ ಭವಿಷ್ಯಕ್ಕೆ ಕಾರ್ಮೋಡ ಆವರಿಸಿದೆ. ಮಾಜಿಗಳಾದವರಿಗು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವ ಗ್ಯಾರಂಟಿ ಇಲ್ಲ. ಹಾಗಾಗಿ ಹಲವರ ರಾಜಕೀಯ ಅಂತ್ಯವಾಗುವ ಸಾಧ್ಯತೆ ಇದೆ.