ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

jnanasoudha Karkala

ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಅಂಗವಾಗಿ ನಡೆಯುತ್ತಿರುವ ಮೂರು ದಿನಗಳ ರಾಷ್ಟ್ರಮಟ್ಟದ ಬಯಲು ಕುಸ್ತಿ ಪಂದ್ಯಾವಳಿಯ (wrestling) ಎರಡನೇ ದಿನವಾದ ಶನಿವಾರ 50ಕ್ಕೂ ಹೆಚ್ಚು ಕುಸ್ತಿಗಳು ನಡೆದವು. ಹಗಲು ಮತ್ತು ಹೊನಲು ಬೆಳಕಿನಲ್ಲಿ ನಡೆದ ಕುಸ್ತಿಯನ್ನು ಸಾವಿರಾರು ಜನರು ವೀಕ್ಷಿಸಿದರು.

ನಗರದ ನೆಹರೂ ಕ್ರೀಡಾಂಗಣದ ಕೆಂಪು ಮಣ್ಣಿನ ಅಂಗಣದ ಮೇಲೆ ದೇಶದ ವಿವಿಧ ಮೂಲೆಗಳಿಂದ ಬಂದ ಪೈಲ್ವಾನರು ಶನಿವಾರ ಮದಗಜಗಳಂತೆ ಸೆಣಸಿದರು.

National-Level-Kusti-at-Nehru-stadium-in-Shimoga

ಶಿವಮೊಗ್ಗ ಕೊಲ್ಲೂರಯ್ಯನ ಗರಡಿಯ ಶಿವು ಯಾನೆ ಸಂಜಯ್ ಪುಣೆಯ ಬಾಬು ನಡುವೆ ನಡೆದ ದಿನದ ದೊಡ್ಡ ಕುಸ್ತಿಯು ಪ್ರಮುಖ ಆಕರ್ಷಣೆಯಾಗಿತ್ತು. ಅರ್ಧಗಂಟೆ ಕಾಲ ಇಬ್ಬರೂ ಪೈಲ್ವಾನರು ಆಕರ್ಷಕ ಪಟ್ಟುಗಳ ಮೂಲಕ ಎದುರಾಳಿಯನ್ನು ಮಣಿಸುವ ಪ್ರಯತ್ನ ನಡೆಸಿದರು. ಆದರೆ, ಕಡೆಯಲ್ಲಿ ವೇಗದ ಪಟ್ಟು ಹಾಕಿ ಚಾಕಚಕ್ಯತೆಯಿಂದ ಬಾಬು ಅವರನ್ನು ಚಿತ್ ಮಾಡಿ ಪೈಲ್ವಾನ್ ಶಿವು ಬೆಳ್ಳಿ ಗದೆಯನ್ನು ಹೆಗಲಿಗೇರಿಸಿಕೊಂಡರು.

ಮತ್ತೊಂದು ಕುಸ್ತಿಯಲ್ಲಿ ಹೊಳೆಹೊನ್ನೂರಿನ ಪೈಲ್ವಾನ್ ಭಟ್ಟ ಬೆಳಗಾವಿ ಪೈಲ್ವಾನ್ ಬಾಳು ಅವರನ್ನು ಹಿಮುಖವಾಗಿ ಎತ್ತಿ ಚಿತ್ ಮಾಡುವ ಮೂಲಕ ನೆರೆದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಫಾರ್ಚುನರ್‌ ಕಾರಿನಲ್ಲಿ ಬಂದು ಇಂಜಿನಿಯರ್‌ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್‌?

ದಿಲ್ಲಿ, ಹರಿಯಾಣ, ಮಹಾರಾಷ್ಟ್ರದ ಪುಣೆ, ಸಾಂಗ್ಲಿ, ಕೊಲ್ಲಾಪುರ, ಆಂಧ್ರದ ಪೈಲ್ವಾನರಲ್ಲದೆ ರಾಜ್ಯದ ಬೀದ‌ರ್, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ಹಲವೆಡೆಯ ನೂರಾರು ಪೈಲ್ವಾನರು ಕುಸ್ತಿಯಲ್ಲಿ ಪಾಲ್ಗೊಂಡಿದ್ದಾರೆ.

ಮೈಗೆ ಮಣ್ಣು ಮೆತ್ತಿಕೊಂಡಿದ್ದ ಪೈಲ್ವಾನರು ಮದಗಜಗಳಂತೆ ಸೆಣಸಿ ಪ್ರೇಕ್ಷಕರನ್ನು ರಂಜಿಸಿದರು. ಬಾಲಕರು ಮತ್ತು ಯುವಕ ಪೈಲ್ವಾನರಲ್ಲದೆ ಬಾಗಲಕೋಟೆ, ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆ, ದಾವಣಗೆರೆ, ಶಿಕಾರಿಪುರದ ಬಾಲಕಿಯರು ಮತ್ತು ಯುವತಿಯರು ಸಹ ಕುಸ್ತಿಯಲ್ಲಿ ಪಾಲ್ಗೊಂಡಿದ್ದರು. ಗೆದ್ದವರಿಗೆ ಬಹುಮಾನವಾಗಿ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯಿಂದ ನಗದು, ಪಾರಿತೋಷಕ ಮತ್ತು ಬೆಳ್ಳಿ ಗದೆಗಳನ್ನು ನೀಡಲಾಯಿತು.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 8, 2026 at 9:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 8, 2026

Leave a Comment