ಶಿವಮೊಗ್ಗ : ಸಂಬಳ ಪ್ಯಾಕೇಜ್ ಯೋಜನೆಗೆ ಸರ್ಕಾರಿ ನೌಕರರು ಶೀಘ್ರ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ವೇತನ (Salary) ತಡೆ ಹಿಡಿಯುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಎಚ್ಚರಿಸಿದರು.
ನೆಹರು ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಸ್.ಷಡಾಕ್ಷರಿ, ವೇತನ ಪ್ಯಾಕೇಜ್ ಯೋಜನೆಯಿಂದ ನೌಕರರಿಗೆ ಅನೇಕ ಅನುಕೂಲವಿದೆ. ಆದ್ದರಿಂದ ಈ ತಿಂಗಳ ಅಂತ್ಯದೊಳಗೆ ಎಲ್ಲರು ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸದ ನೌಕರರ ವೇತನ ತಡೆ ಹಿಡಿಯುವಂತೆ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಈಚೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ವೇತನ (Salary) ಪ್ಯಾಕೇಜ್ ಅಡಿ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ 70 ಲಕ್ಷ ರೂ. ನೆರವು ತಲುಪಿತ್ತು. ಈ ಹಿನ್ನಲೆ ಕುಟುಂಬದವರು ತಮಗೆ ಕರೆ ಮಾಡಿ ಧನ್ಯವಾದ ತಿಳಿಸಿದ್ದರು. ಅಲ್ಲದೆ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸರ್ಕಾರಿ ನೌಕರರು ಈ ಯೋಜನೆಯ ಲಾಭ ಪಡೆಯಬೇಕು ಎಂದು ಷಡಾಕ್ಷರಿ ಉದಾಹರಣೆ ನೀಡಿದರು.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಗುಡ್ ನ್ಯೂಸ್ ನೀಡಿದ ಕೆಎಸ್ಆರ್ಟಿಸಿ

ಮತ್ತಷ್ಟು ಸೌಲಭ್ಯ ಕುರಿತು ಚರ್ಚೆ

ವೇತನ ಪ್ಯಾಕೇಜ್ ಯೋಜನೆ ಜೊತೆಗೆ ಸರ್ಕಾರಿ ನೌಕರರಿಗೆ ಮತ್ತಷ್ಟು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕುಗಳ ಜೊತೆಗೆ ಚರ್ಚೆ ನಿಗದಿಯಾಗಿದೆ. ಏ.15ರಂದು ವಿಧಾನಸೌಧದಲ್ಲಿ ಬ್ಯಾಂಕುಗಳ ಸಭೆ ನಡೆಯಲಿದೆ. ಕನಿಷ್ಠ ಶೇ.1ರಷ್ಟು ಕಡಿಮೆ ದರದಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ ನೀಡಬೇಕು ಎಂಬುದು ಸೇರಿದಂತೆ ಅನೇಕ ವಿಚಾರಗಳ ಚರ್ಚೆ ನಡೆಸಲಾಗುತ್ತದೆ ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದರು.

ಕೇಂದ್ರ ಮಾದರಿ ವೇತನಕ್ಕೆ ಹೋರಾಟ
ಆರೋಗ್ಯ ಸಂಜೀವಿನಿ ಯೋಜನೆ ಅಡಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ 2 ಸಾವಿರ ಕಾಯಿಲೆಗಳಿಗೆ ನಗದು ರಹಿತ ಚಿಕಿತ್ಸೆ ದೊರೆಯಲಿದೆ. ತಮ್ಮ ನೇತೃತ್ವದಲ್ಲಿ ಸಂಘ ನಡೆಸಿದ ಹೋರಾಟದ ಫಲ ಈ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಇನ್ನು, ಕೇಂದ್ರ ಮಾದರಿ ವೇತನಕ್ಕೆ ಹೋರಾಟಕ್ಕೆ ಸಿದ್ಧರಾಗಬೇಕಿದೆ. 2026-27ರಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ 8ನೇ ವೇತನ ಆಯೋಗ ಜಾರಿಯಾಗಲಿದೆ. ಇದೇ ವೇಳೆ ಕೇಂದ್ರ ಮಾದರಿ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೆ ಕೊಡಿಸಲು ಹೋರಾಟ ನಡೆಸಲಾಗುತ್ತದೆ. ಇದರಿಂದ 5.20 ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಎಂದು ಷಡಾಕ್ಷರಿ ತಿಳಿಸಿದರು.

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ
ರಾಜ್ಯಾದ್ಯಂತ ಜಿಲ್ಲಾಮಟ್ಟದ ಕ್ರೀಡಾಕೂಟಗಳು ನಡೆಯುತ್ತಿವೆ. ಆ ನಂತರ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದೆ. ಈ ಬಾರಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಲವು ಕಾರ್ಯಕ್ರಮಗಳು ಈ ಸಂದರ್ಭ ಇರಲಿದೆ. 15 ಸಾವಿರ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇದನ್ನೂ ಓದಿ » ಪ್ರಿಯಾ ಹೆಸರಿನ ಗ್ರೂಪ್ ಸೇರಿದ್ದ ಶಿವಮೊಗ್ಗದ ಯುವಕನಿಗೆ ಸ್ವಲ್ಪ ದಿನದ ಬಳಿಕ ಕಾದಿತ್ತು ಬಿಗ್ ಶಾಕ್, ಆಗಿದ್ದೇನು?
ಇನ್ನು, ಶಿವಮೊಗ್ಗದ ಕೆ.ಇ.ಬಿ ಸರ್ಕಲ್ನಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ರಾಜ್ಯದಲ್ಲೇ ಮಾದರಿಯಾದ ವ್ಯವಸ್ಥೆ ಶಿವಮೊಗ್ಗದಲ್ಲಿದೆ ಎಂದು ಷಡಾಕ್ಷರಿ ತಿಳಿಸಿದರು.
ಇದನ್ನೂ ಓದಿ » ನೆಹರು ಸ್ಟೇಡಿಯಂನಲ್ಲಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ, ಪ್ರತಿಜ್ಞೆ ಸ್ವೀಕಾರ, ಯಾರೆಲ್ಲ ಏನೆಲ್ಲ ಮಾತಾಡಿದರು?
