ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಆಸ್ತಿಗಳಿಗೆ ಸಂಬಂಧಪಟ್ಟಂತೆ ಪಂಚಾಯಿತಿಯಿಂದ ಇ– ಆಸ್ತಿ (ನಮೂನೆ– 3) ದಾಖಲೆಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಅದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯೇ ಕಾರಣ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಸಲಹೆ, ಸೂಚನೆ ನೀಡಿದರೂ ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ. ಜನ ಇದರಿಂದ ಬೇಸತ್ತು ಪ್ರತಿಭಟನೆಗೆ ಮುಂದಾಗಿದ್ದಾರೆ. ತಕ್ಷಣ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ.ಶಿವಕುಮಾರ್ ಎಚ್ಚರಿಸಿದರು.
‘ಜನರು ತಮ್ಮ ಆಸ್ತಿ ಹಕ್ಕು ಪಡೆಯಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ವರ್ಷಗಟ್ಟಲೆ ಅಲೆದಾಡಿಸುತ್ತಿದ್ದಾರೆ. ಕೆಲ ಮುಖಂಡರೊಂದಿಗೆ ಶಾಮೀಲಾಗಿ ಕೆಲವರ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ. ಸಾರ್ವಜನಿಕರ ಕೆಲಸದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಇಂತಹ ಸಿಬ್ಬಂದಿ ವಿರುದ್ಧ ಹೋರಾಟ ನಡೆಸಲಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಉಮೇಶ್ ತಿಳಿಸಿದರು.
‘ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ, ರಸ್ತೆ ಸೇರಿ ಮೂಲ ಸೌಕರ್ಯ ಪಡೆಯುವುದು ನಮ್ಮ ಹಕ್ಕು. ಆದರೆ ಕನಿಷ್ಠ ಹಕ್ಕಿಗೂ ಧಕ್ಕೆ ತರುತ್ತಿದ್ದಾರೆ’ ಎಂದು ಮಾಜಿ ಅಧ್ಯಕ್ಷ ಎಚ್.ಕೆ.ಶ್ರೀನಿವಾಸ್ ದೂರಿದರು.
ಸ್ಥಳಕ್ಕೆ ಬಂದ ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಸಾದ್ ಪ್ರತಿಭಟನಕಾರರ ಮನವೊಲಿಸಲು ಸಭೆ ನಡೆಸಿದರು. ಮೂರು ತಿಂಗಳ ಮುಂಚೆ ನೀಡಿದ ಅರ್ಜಿಗಳನ್ನು ಮೊದಲು ಇತ್ಯರ್ಥಗೊಳಿಸಬೇಕು. ನಂತರ ಹಿಂದಿನ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ನಾಗೇಶ್, ಮುಖಂಡರಾದ ದ್ಯಾಮಪ್ಪ, ಬಿ.ಸಂದೇಶ್, ನವೀನ್, ಎಚ್.ಕೆ.ಮಂಜುನಾಥ್, ಕನ್ನಯ್ಯಲಾಲ್, ಸಂತೋಷ್ಲಾಲ್, ಆದಿತ್ಯ, ಜಾವೀದ್, ಕೇಶವ, ಇಮ್ರಾನ್, ವೇಲು, ಖಲೀಲ್, ಶೇಖರಪ್ಪ, ಬೀರೇಂದ್ರ ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ನವೆಂಬರ್ 9ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?