ಚಳ್ಳಕೆರೆ: ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಕಾರು ಡಕ್ಕಿಯಾಗಿ ಶಿವಮೊಗ್ಗದ ಫೋಟೊಗ್ರಾಫರ್ ಸಾವನ್ನಪ್ಪಿದ್ದಾರೆ. ಉಳಿದ ಮೂವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ ಘಟನೆ ಸಂಭವಿಸಿದೆ.
ಶಿವಮೊಗ್ಗದ ಎಲ್ಬಿಎಸ್ ನಗರದ ಫೋಟೊಗ್ರಾಫರ್ ಅರ್ಜುನ್ (37) ಮೃತ ದುರ್ದೈವಿ. ಶರತ್, ನವೀನ್ ಮತ್ತು ಬಸವರಾಜು ಎಂಬುವವರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೇಗಾಯ್ತು ಘಟನೆ?
ಬಳ್ಳಾರಿಯಲ್ಲಿ ಮದುವೆ ಸಮಾರಂಭದ ಫೋಟೊ ಶೂಟ್ಗಾಗಿ ನಾಲ್ವರು ಫೋಟೊಗ್ರಾಫರ್ಗಳು ತೆರಳುತ್ತಿದ್ದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗಿರಿಯಮ್ಮನಹಳ್ಳಿ ಬಳಿ ಹೈವೇ ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.
ಗಂಭೀರ ಗಾಯಗೊಂಡಿದ್ದ ಅರ್ಜುನ್ನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಸ್ವಲ್ಪ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶರತ್ ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀನ್ ಮತ್ತು ಬಸವರಾಜು ಅವರನ್ನು ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಳ್ಳಕೆರೆಯ ತಳಕು ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ » ಹಬ್ಬದ ವೇಳೆ ಕೆರೆಗೆ ಹಾರಿ ‘ಮುಗಳಿಕೊಪ್ಪದ ಮುತ್ತು’ ಸಾವು







