ಶಿವಮೊಗ್ಗದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೊ, ಏನಂದ್ರು ಅಧ್ಯಕ್ಷರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಸಿನಿಮಾ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆ ಅಪಾರ ಕೊಡುಗೆ ನೀಡುತ್ತಿದೆ. ಹೀಗಾಗಿ ಇಲ್ಲಿ ಕಂಠೀರವ ಸ್ಟುಡಿಯೊ ನಿರ್ಮಾಣ ಮಾಡಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷ ಮೆಹಬೂಬ್ ಭಾಷಾ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಹಬೂಬ್‌ ಭಾಷಾ, ಕಂಠೀರವ ಸ್ಟುಡಿಯೊವನ್ನು ರಾಜ್ಯದ ವಿವಿಧೆಡೆಗೆ ವಿಸ್ತರಣೆ ಮಾಡುವ ಉದ್ದೇಶವನ್ನು ನಿಗಮ ಹೊಂದಿದೆ. ಇದಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಬಹಳಷ್ಟು ಬೇಡಿಕೆಯೂ ಇದೆ. ಹಾಗಾಗಿ ಶಿವಮೊಗ್ಗ ನಗರವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದಕ್ಕೆ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿ ಪಕ್ಕದಲ್ಲಿ 25 ಎಕರೆ ಭೂಮಿ ಮಂಜೂರಾತಿ ಮಾಡುವಂತೆ ಜಿಲ್ಲಾಡಳಿತಕ್ಕೆ ಕೋರಿದ್ದೇವೆ ಎಂದು ಹೇಳಿದರು.

ಇತರೆ ಜಿಲ್ಲೆಗಳಲ್ಲು ಸ್ಟುಡಿಯೋ ನಿರ್ಮಾಣ

ಶಿವಮೊಗ್ಗದಲ್ಲಿ ನಡೆಯುವ ಹೊರಾಂಗಣ ಮತ್ತು ಒಳಾಂಗಣ ಸಿನಿಮಾ ಚಿತ್ರೀಕರಣಕ್ಕೆ ಈ ಸ್ಟುಡಿಯೊದಿಂದ ಬಹಳಷ್ಟು ಅನುಕೂಲವಾಗಲಿದೆ. ಇದರಿಂದ ಭಾಷೆ ಉಳಿಯುತ್ತದೆ ಹಾಗೂ ಪ್ರತಿಭೆಗಳು ಬೆಳೆಯುತ್ತವೆ. ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಮಾತ್ರವಲ್ಲದೇ ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ವಿಜಯನಗರ ಜಿಲ್ಲೆಗಳಲ್ಲಿ ಸ್ಟುಡಿಯೊ ನಿರ್ಮಿಸುವ ಯೋಜನೆ ಮಾಡಲಾಗಿದೆ. ಸರ್ಕಾರ ಇದಕ್ಕಾಗಿ ಈಗಾಗಲೇ ಬಜೆಟ್‌ನಲ್ಲಿ ₹5 ಕೋಟಿ ಅನುದಾನ ನೀಡಿದೆ. ರಾಮೋಜಿ ಫಿಲ್ಮ್‌ ಸಿಟಿ ಮಾದರಿಯಲ್ಲಿ ವಾರ್ತಾ ಇಲಾಖೆಯಿಂದ ಮೈಸೂರಿನಲ್ಲಿ 160 ಎಕರೆಯಲ್ಲಿ ಫಿಲ್ಮ್‌ ಸಿಟಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಓಟಿಟಿಗೆ ಸಿಎಂ ಸ್ಪಂದನೆ

ಕನ್ನಡದಲ್ಲಿ ಓಟಿಟಿ ಪ್ರಾರಂಭ ಮಾಡಲು ನಿಗಮದಿಂದ ಈಗಾಗಲೇ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಕನ್ನಡದ ಕಿರುತೆರೆ, ಬೆಳ್ಳಿ ಪರದೆಗೆ ಹಾಗೂ ಅವುಗಳ ಕಾರ್ಯಗಳಿಗೆ ಓಟಿಟಿ ನಿರ್ಮಾಣ ಮಾಡಲು ಸರ್ಕಾರ 2025ರ ಆಯವ್ಯಯದಲ್ಲಿ ಅನುದಾನ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ಕನ್ನಡ ಓಟಿಟಿ, ಸರ್ಕಾರದ ಕಾರ್ಯಕ್ರಮವಾಗಿದೆ. ಅದಕ್ಕೆಂದು ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಎರಡು ಸಭೆಗಳನ್ನು ನಡೆಸಿದ್ದು, ಓಟಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೂಪುರೇಷೆ ತಯಾರಿಸಲಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹಾಜರಿದ್ದರು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ಪದಾಧಿಕಾರಿಗಳ ನೇಮಕ, ಯಾರಿಗೆಲ್ಲ ಯಾವ ಜವಾಬ್ದಾರಿ ನೀಡಲಾಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment