ಶಿವಮೊಗ್ಗ: ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಯೋಜಿಸಿದೆ. ಇದು ಸಂವಿಧಾನ ವಿರೋಧಿ ಕೃತ್ಯ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ (Bajrang Dal) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿಹೆಚ್ಪಿ ಮತ್ತು ಬಜರಂಗದಳ ಕಾರ್ಯಕರ್ತರು, ಗೋ ಹತ್ಯೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರವು ಗೋವುಗಳ ಕಳ್ಳ ಸಾಗಣೆದಾರರ ಅನುಕೂಲ ಮಾಡಿಕೊಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಕಾಯ್ದೆಗೆ ತಿದ್ದುಪಡಿ ತಂದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡಿದ ಪ್ರಾಂತ್ಯ ಸುರಕ್ಷಾ ಪ್ರಮುಖ ರಾಜೇಶ್ ಗೌಡ, ‘ಗೋ ಹತ್ಯೆ, ಕಳ್ಳಸಾಗಣೆ ವಿರುದ್ಧ ವಿಶ್ವ ಹಿಂದೂ ಪರಿಷದ್, ಬಜರಂಗದಳ ಸತತ 30 ವರ್ಷ ಹೋರಾಟ ಮಾಡಿವೆ. ಬಿಜೆಪಿ ಸರ್ಕಾರ ಬಂದ ಮೇಲೆ ಗೋಹತ್ಯೆ ತಡೆಯುವ ಕಾನೂನು ತರಲಾಯಿತು. ಪೊಲೀಸರು ಕಾನೂನನ್ನು ಕಠಿಣವಾಗಿ ಜಾರಿಗೊಳಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಗೋಹತ್ಯೆ ಹೆಚ್ಚಾಗಿದೆ. ಈಗ ಕಾನೂನು ಸಡಿಲಗೊಳಿಸಿ ಗೋ ಹತ್ಯೆ ಮಾಡುವವರ ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವಿರುದ್ಧ ಮಹಿಳೆಯರು ಆಕ್ರೋಶ, ತಕ್ಷಣ ಕ್ಷಮೆಗೆ ಒತ್ತಾಯ, ಕಾರಣವೇನು?
ಪ್ರತಿಭಟನೆಯಲ್ಲಿ ವಿಹೆಚ್ಪಿ ಜಿಲ್ಲಾಧ್ಯಕ್ಷ ವಾಸುದೇವ್, ಜಿಲ್ಲಾ ಸಹ ಸಂಯೋಜಕರಾದ ಅಂಕುಶ್, ಸುರೇಶ್ ಬಾಬು, ಅರ್ಜುನ್, ಪ್ರಭು ಸೇರಿದಂತೆ ಹಲವರು ಇದ್ದರು.
