ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಸರ್ಕಾರಿ ನೌಕರನ ಕಚೇರಿ ಟೇಬಲ್ಗೆ ಸಂಘದ ಅಧಿಕೃತ ಕ್ಯಾಲೆಂಡರ್ (calendars) ತಲುಪಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಷಡಾಕ್ಷರಿ, ಇಡೀ ದೇಶದಲ್ಲಿ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘವು ಮೊದಲ ಬಾರಿಗೆ ಜಾರಿಗೆ ತಂದಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಬೆಂಗಳೂರು ನಗರದ ಸುಮಾರು 50,000 ನೌಕರರಿಗೆ ಕ್ಯಾಲೆಂಡರ್ ವಿತರಣೆ ಕಾರ್ಯ ಮುಕ್ತಾಯ ಹಂತದಲ್ಲಿದೆ ಎಂದು ತಿಳಿಸಿದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗದ ನೌಕರರಿಗೆ ವಿತರಣೆ
ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸುಮಾರು 15,000 ನೌಕರರಿಗೆ ಇದು ತಲುಪಲಿದೆ. ಈ ಕ್ಯಾಲೆಂಡರ್ ಅತ್ಯಂತ ಗುಣಮಟ್ಟದಿಂದ ಕೂಡಿದೆ. ಅಗತ್ಯ ಮಾಹಿತಿಗಳನ್ನು ಒಳಗೊಂಡಿದೆ. ಐಎಎಸ್ ಅಧಿಕಾರಿಗಳು ಕೂಡ ತಮ್ಮ ಕಚೇರಿಗಳಿಗೆ ಈ ಕ್ಯಾಲೆಂಡರ್ ಬೇಕೆಂದು ಪತ್ರ ಬರೆಯುತ್ತಿದ್ದಾರೆ ಎಂದು ತಿಳಿಸಿದರು.

ಚುನಾವಣಾ ಭರವಸೆ ಈಡೇರಿಕೆ
ಸಂಘದ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ, ಪ್ರತಿ ವರ್ಷ ನೌಕರರಿಗೆ ಕ್ಯಾಲೆಂಡರ್ ನೀಡಲಾಗುತ್ತಿದೆ. ಕಳೆದ ಬಾರಿ ಸಮಯದ ಅಭಾವವಿದ್ದರೂ 3 ಲಕ್ಷ ನೌಕರರಿಗೆ ತಲುಪಿಸಲಾಗಿತ್ತು. ಈ ಬಾರಿ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ 6 ಲಕ್ಷ ನೌಕರರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಜಿಲ್ಲಾಧ್ಯಕ್ಷರು ಮತ್ತು ನಿರ್ದೇಶಕರ ಮೂಲಕ ಪ್ರತಿ ಹಂತದಲ್ಲೂ ಕ್ಯಾಲೆಂಡರ್ ವಿತರಣೆಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ » ಈಶ್ವರಪ್ಪ ನೇತೃತ್ವದ ಕಾರ್ಯಕ್ರಮ, ಶಿವಮೊಗ್ಗ ವಕೀಲರಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು, ಯಾಕೆ?
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.