ಶಿವಮೊಗ್ಗದಲ್ಲಿ ಫಲಪುಷ್ಪ ಪ್ರದರ್ಶನದ ದಿನಾಂಕ ಪ್ರಕಟ, ಏನೆಲ್ಲ ವಿಶೇಷತೆ ಇರಲಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಜನವರಿ 24 ರಿಂದ 27ರವರೆಗೆ ಮಲೆನಾಡ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಮತ್ತು ಪುಷ್ಪಸಿರಿ ಫಲಪುಷ್ಪ ಪ್ರದರ್ಶನ (Flower Show) ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್.ಹೇಮಂತ್‌, ಜನವರಿ 24ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಶಾಸಕರಾದ ಬಿ.ಕೆ.ಸಂಗಮೇಶ್ವರ, ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಎಸ್‌.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

f1
🌸 ಈ ಬಾರಿಯ ಪುಷ್ಪಸಿರಿ ವಿಶೇಷತೆಗಳು
01. 2 ಲಕ್ಷ ಹೂವುಗಳು:
ಈ ಬಾರಿಯ ಪ್ರದರ್ಶನದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ವಿವಿಧ ಬಣ್ಣದ ಹೂವುಗಳನ್ನು ಬಳಸಿ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ.
02. ಕೆಳದಿ ಶಿವಪ್ಪ ನಾಯಕ ಪ್ರತಿಮೆ:
16 ಅಡಿ ಎತ್ತರದ ಕೋಟೆ ಹಾಗೂ ಶಿವಪ್ಪ ನಾಯಕರ ಭವ್ಯ ಪ್ರತಿಮೆಯನ್ನು ವಿವಿಧ ಹೂವುಗಳಿಂದ ರಚಿಸಲಾಗುತ್ತದೆ.
03. ಕೇದಾರೇಶ್ವರ ದೇವಸ್ಥಾನ:
ಬಳ್ಳಿಗಾವಿಯ ಐತಿಹಾಸಿಕ ಕೇದಾರೇಶ್ವರ ದೇವಸ್ಥಾನದ 15 ಅಡಿ ಎತ್ತರದ ಮಾದರಿಯನ್ನು ಹೂವುಗಳಿಂದ ನಿರ್ಮಿಸಲಾಗುತ್ತದೆ.
04. ಜೋಗ ಜಲಪಾತ:
ಹೂವು ಮತ್ತು ಫೋಲಿಯೇಜ್ ಬಳಸಿ 60 ಅಡಿ ಅಗಲ ಹಾಗೂ 22 ಅಡಿ ಎತ್ತರದ ಜೋಗ ಜಲಪಾತದ ಸುಂದರ ನೋಟವನ್ನು ಮರುಸೃಷ್ಟಿಸಲಾಗುತ್ತದೆ.
05. ಸೆಲ್ಫಿ ಪಾಯಿಂಟ್:
‘I Love Shivamogga’ ಎಂಬ ವಿಶೇಷ ಸೆಲ್ಫಿ ಪಾಯಿಂಟ್ ಪ್ರವಾಸಿಗರ ಆಕರ್ಷಣೆಗೆ ಸಿದ್ಧವಾಗಲಿದೆ.

ಸಿರಿಧಾನ್ಯ ಮೇಳ, ಕರಕುಶಲ ಪ್ರದರ್ಶನ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. Crafts of Malnad ಎಂಬ ಬ್ರ್ಯಾಂಡ್ ಅಡಿ ಮಲೆನಾಡಿನ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

f2

ಕೈಮಗ್ಗ ಮತ್ತು ಜವಳಿ ಪ್ರದರ್ಶನ

ಜವಳಿ ಮತ್ತು ಕೈಮಗ್ಗ ಇಲಾಖೆ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ದೇಶದ 11 ರಾಜ್ಯಗಳ ಭೌಗೋಳಿಕ ಮಾನ್ಯತೆ ಹೊಂದಿರುವ ಸೀರೆಗಳು, ಶಾಲುಗಳು ಮತ್ತು ಬೆಡ್ ಶೀಟ್‌ಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ. KSIC ರೇಷ್ಮೆ ಸೀರೆಗಳ ಮೇಳ ಆಯೋಜಿಸಲಾಗಿದೆ ಎಂದರು.

” ಕಳೆದ ಬಾರಿ ಸುಮಾರು 70 ರಿಂದ 75 ಸಾವಿರ ಜನರು ಭೇಟಿ ನೀಡಿದ್ದರು. ಈ ಬಾರಿ ಫ್ರೀಡಂ ಪಾರ್ಕ್‌ನಲ್ಲಿ ಉತ್ತಮ ಪಾರ್ಕಿಂಗ್ ಮತ್ತು ಸ್ಥಳಾವಕಾಶ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಲಾಲ್‌ಬಾಗ್ ಮಾದರಿಯಲ್ಲೇ ಅತ್ಯಂತ ವ್ಯವಸ್ಥಿತವಾಗಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.”
ಎನ್‌.ಹೇಮಂತ್‌, ಜಿಲ್ಲಾ ಪಂಚಾಯಿತಿ ಸಿಇಒ
f3
ರೈತರು ಮತ್ತು ಮಹಿಳೆಯರಿಗಾಗಿ ಸ್ಪರ್ಧೆಗಳು
01. ರೈತರಿಗಾಗಿ ಸ್ಪರ್ಧೆ
ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಬೆಳೆದ ವಿಶಿಷ್ಟ ಮತ್ತು ವಿಶೇಷ ತಳಿಯ ಹೂವು, ಹಣ್ಣು ಹಾಗೂ ತರಕಾರಿ ಪ್ರದರ್ಶನ ಮತ್ತು ಸ್ಪರ್ಧೆ.
02. ಹೂವಿನ ರಂಗೋಲಿ ಸ್ಪರ್ಧೆ
ಮಹಿಳೆಯರಿಗಾಗಿ ಹೂವು, ಹಣ್ಣು, ತರಕಾರಿ ಹಾಗೂ ಧಾನ್ಯಗಳನ್ನು ಬಳಸಿ ರಂಗೋಲಿ ಬಿಡಿಸುವ ಸ್ಪರ್ಧೆ.

ಜನವರಿ 27ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉದ್ಘಾಟಿಸಲಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಂದು ಪ್ರಶಸ್ತಿ ನೀಡಲಾಗುತ್ತದೆ ಎಂದು‌ ಎನ್.ಹೇಮಂತ್‌ ತಿಳಿಸಿದರು.

ಇದನ್ನೂ ಓದಿ – ಡಿಸಿಸಿ ಬ್ಯಾಂಕಿಗೆ ನುಗ್ಗಿದ ಜಿಂಕೆ ರಕ್ಷಣೆ, ಆಗಿದ್ದೇನು?

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಂದಿನಿ.ಆರ್‌.ಬಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್‌ ಕುಮಾರ್‌.ಎಂ, ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್‌ ಕುಂಸಿ, ಜಿ.ಎಂ.ರಘು ಸೇರಿದಂತೆ ಹಲವರು ಇದ್ದರು.  

Total-Readers-of-Shivamogga-Live
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 20, 2026 at 12:22 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 20, 2026

Leave a Comment