ಶಿವಮೊಗ್ಗ: ಗುಡ್ಡೇಕಲ್ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ 7ನೇ ವರ್ಷದ ತೈಪೂಸಂ ಜಾತ್ರಾ ಮಹೋತ್ಸವ (Thaipoosam festival) ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಜನರು ಹಾಲಿನ ಕುಂಭ ಹೊತ್ತು ಬಂದು ದೇವರಿಗೆ ಅಭಿಷೇಕ ಮಾಡಿ ಪುನೀತರಾದರು.
ಬೆಳಗ್ಗೆಯಿಂದಲೇ ಪೂಜೆ, ಆರಾಧನೆ
ಪುಷ್ಯ ಮಾಸದ ಪ್ರಯುಕ್ತ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತೈಪೂಸಂ ಜಾತ್ರಾ ಮಹೋತ್ಸವ ನಡೆಯಿತು. ದೇಗುಲದಲ್ಲಿ ಬೆಳಗೆಯಿಂದಲೆ ನಿರಂತರ ಪೂಜೆ ನಡೆಯುತ್ತಿದೆ. ಇಂದು ದೀಪಾರಾಧನೆ ನೆರವೇರಿಸಲಾಯಿತು. ಬಳಿಕ ಹಾಲಿನ ಕುಂಭ ಹೊತ್ತು ಬಂದ ಭಕ್ತರು ದೇವರಿಗೆ ಅಭಿಷೇಕ ಮಾಡಿದರು.


ನಗರದ ವಿವಿಧೆಡೆಯಿಂದ ಮೆರವಣಿಗೆ
ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪ ಮತ್ತು ಗಾಂಧಿ ಬಜಾರ್ನ ಶ್ರೀ ರೇಣುಕಾಂಬ ದೇವಸ್ಥಾನದಿಂದ ಹಾಲಿನ ಕುಂಭ ಹೊತ್ತು ಮಹಿಳೆಯರು ಮೆರವಣಿಗೆ ನಡೆಸಿದರು. ಶಿವಪ್ಪನಾಯಕ ಪ್ರತಿಮೆ ಬಳಿ ಎರಡು ಕಡೆಯಿಂದ ಕುಂಭ ಹೊತ್ತು ಬಂದವರು ಸಂಗಮವಾಗಿ ಅಲ್ಲಿಂದ ಗುಡ್ಡೇಕಲ್ಗೆ ಮೆರವಣಿಗೆ ನಡೆಸಿದರು. ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಶ್ರೀ ಬಾಲಸುಬ್ರಹ್ಮಣ್ಯ ದೇವರಿಗೆ ಹಾಲಿನ ಅಭಿಷೇಕ ಮಾಡಲಾಯಿತು.
ಸಾವಿರ ಸಾವಿರ ಭಕ್ತರು ಭಾಗಿ
ಜಾತ್ರೆ ಅಂಗವಾಗಿ ಗುಡ್ಡೇಕಲ್ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ವಿವಿಧ ಹರಕೆ ತೀರಿಸಿ ಪೂಜೆ ಸಲ್ಲಿಸಿದರು. ಇನ್ನು, ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್, ಕಾರ್ಯಕರ್ತರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ