ಶಿವಮೊಗ್ಗ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಕಠಿಣ ಮಾರ್ಗಸೂಚಿ ಇಂಡಿಗೋ ಏರ್ಲೈನ್ಸ್ (IndiGo) ಸಂಸ್ಥೆಗೆ ಸಂಕಷ್ಟ ತಂದಿದೆ. ಹಾಗಾಗಿ ಇಂಡಿಗೋ ಏರ್ಲೈನ್ಸ್ ಮೇ 1 ರಿಂದ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಇಂಡಿಗೋ ಪ್ರಸ್ತುತ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಪ್ರತಿದಿನ ವಿಮಾನಗಳನ್ನು ಓಡಿಸುತ್ತಿದೆ. ಕಂಪನಿಯು ಮೂರು ತಿಂಗಳ ಅವಧಿಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ವಿಮಾನ ನಿಲ್ದಾಣಕ್ಕೆ ತಿಳಿಸಿದೆ. ಮೇ ಮಧ್ಯಭಾಗದಿಂದ ಮುಂಗಾರು ಹಂಗಾಮು ಕೂಡ ಪ್ರಾರಂಭವಾಗುವುದರಿಂದ, ಇದು ಆಫ್-ಸೀಸನ್ ಅವಧಿಯಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಠಿಣ ಮಾರ್ಗಸೂಚಿಗೆ ಕಾರಣವೇನು?
2025ರ ಜೂನ್ 12ರಂದು ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು. ಆ ಬಳಿಕ ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗಾಗಿ ಡಿಜಿಸಿಎ ಕೆಲವು ನಿಯಮಗಳನ್ನು ರೂಪಿಸಿದೆ. ಅವುಗಳನ್ನು ಜಾರಿಗೆ ತರಲು ವಿಮಾನಯಾನ ಸಂಸ್ಥೆಗಳಿಗೆ ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ. ಆ ನಿಯಮದ ಅನುಷ್ಠಾನದಿಂದಾಗಿ ಇಂಡಿಗೋದಲ್ಲಿ ಪೈಲಟ್ಗಳ ಕೊರತೆಯಿದೆ. ಇದು ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಪ್ರಸ್ತುತ ಇಂಡಿಗೋ ವಿಮಾನ ಮಧ್ಯಾಹ್ನ 1:30ಕ್ಕೆ ಬೆಂಗಳೂರಿನಿಂದ ಹೊರಟು 2:40ಕ್ಕೆ ಶಿವಮೊಗ್ಗ ತಲುಪುತ್ತಿದೆ. ಮಧಾಹ್ನ 3 ಗಂಟೆಗೆ ಶಿವಮೊಗ್ಗದಿಂದ ಹೊರಟು 4:05ಕ್ಕೆ ಬೆಂಗಳೂರು ತಲುಪುತ್ತಿದೆ. ಮೇ 1ರಿಂದ ವಿಮಾನಯಾನ ರದ್ದುಗೊಳಿಸುತ್ತಿರುವುದರಿಂದ ಬುಕಿಂಗ್ ಕೂಡ ನಿಲ್ಲಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?
ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ಪ್ರತಿದಿನ ವಿಮಾನಗಳನ್ನು ಓಡಿಸುತ್ತಿದೆ. ಸ್ಪೈಸ್ಜೆಟ್ ವಿಮಾನ ಶಿವಮೊಗ್ಗದಿಂದ ಹೈದರಾಬಾದ್ ಮತ್ತು ಚೆನ್ನೈಗೆ ಪ್ರತಿದಿನ ವಿಮಾನಗಳನ್ನು ಓಡಿಸುತ್ತಿದೆ. ಆದಾಗ್ಯೂ, ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಪ್ರಯಾಣಿಕರ ಸಂಚಾರ ಹೆಚ್ಚಿದೆ.


About The Editor
ನಿತಿನ್ ಆರ್.ಕೈದೊಟ್ಲು






