ಶಿವಮೊಗ್ಗ: ಊರುಗಡೂರಿನಲ್ಲಿ ಗಲಾಟೆ ಬಿಡಿಸಲು ಹೋದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರ ಸಂಜೆ ಸರ್ವಧರ್ಮೀಯರು ಹಾಗೂ ಸೂಳೆಬೈಲು ಗ್ರಾಮಸ್ಥರು ಒಗ್ಗೂಡಿ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮೇಣದ ಬತ್ತಿ (candle light march) ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹತ್ಯೆಗೀಡಾದ ವಿದ್ಯಾರ್ಥಿ ಸಂಕೇತ್ಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ನೂರಾರು ಜನರು ಕೈಯಲ್ಲಿ ಮೆಣದಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಹಿಂದೂ-ಮುಸ್ಲಿಂ ಮುಖಂಡರು ಹಾಗೂ ಗ್ರಾಮಸ್ಥರು ಪಕ್ಷಭೇದ ಮರೆತು ಪಾಲ್ಗೊಂಡಿದ್ದು ಸಂತಾಪ ವ್ಯಕ್ತಪಡಿಸಿದರು.
ಊರುಗಡೂರು, ಸೂಳೆಬೈಲು ಪ್ರದೇಶಗಳಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಕೂಡಲೇ ಗಾಂಜಾ ಮಾರಾಟಗಾರರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂಕೇತ್ ಹತ್ಯೆ ಮಾಡಿದ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಯಿತು. ಈ ಸಂಬಂಧ ಹೆಚ್ಚುವರಿ ರಕ್ಷಣಾಧಿಕಾರಿ ಕಾರಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸೂಳೆಬೈಲು ಸರ್ಕಲ್ನಲ್ಲಿ ಸಂಕೇತ್ ಕುಟುಂಬಸ್ಥರನ್ನು ಭೇಟಿ ಮಾಡಿದ ಮುಖಂಡರು ಅವರಿಗೆ ಧೈರ್ಯ ತುಂಬಿ, ಸಂತಾಪ ಸೂಚಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.


ಇದನ್ನೂ ಓದಿ – ಊರುಗಡೂರಿನ ಸಂಕೇತ್ ಮನೆಗೆ ಸಂಸದ ರಾಘವೇಂದ್ರ ಭೇಟಿ, ಒಂದು ಲಕ್ಷ ರುಪಾಯಿ ನೆರವು

About The Editor
ನಿತಿನ್ ಆರ್.ಕೈದೊಟ್ಲು






