ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯಾದ್ಯಂತ ಸೋಮವಾರ ಭಾರಿ ಮಳೆಯಾಗಿದೆ. ಶಿವಮೊಗ್ಗ ಸಿಟಿ ಸೇರಿದಂತೆ ವಿವಿಧೆಡೆ ಮತ್ತೆ ಆಲಿಕಲ್ಲು ಸಹಿತ ಮಳೆಯಾಗಿದೆ (hailstorms). ಗುಡುಗು, ಮಿಂಚು ಮತ್ತು ಜೋರು ಗಾಳಿಯಿಂದಾಗಿ ವಿವಿಧೆಡೆ ಹಾನಿಯಾದ ವರದಿಯಾಗಿದೆ.
ಎಲ್ಲೆಲ್ಲಿ ಹೇಗಿತ್ತು ಮಳೆ?
ಶಿವಮೊಗ್ಗ ಸಿಟಿಯಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇತ್ತು. ರಾತ್ರಿ 7 ಗಂಟೆ ಬಳಿಕ ಜೋರು ಮಳೆ ಆರಂಭವಾಯಿತು. ಗುಡುಗು, ಮಿಂಚು, ಗಾಳಿಯ ಅಬ್ಬರವು ಜೋರಿತ್ತು. ವಿವಿಧೆಡೆ ಮರದ ಕೊಂಬೆಗಳು ಬಿದ್ದು ಸಣ್ಣಪುಟ್ಟ ಹಾನಿಯಾಗಿದೆ. ಅರ್ಧ ಗಂಟೆ ನಿರಂತರ ಮಳೆಯಿಂದಾಗಿ ವಿವಿಧೆಡೆ ರಸ್ತೆ ಮೇಲೆ ನೀರು ನಿಂತಿತ್ತು.

ಹೊಳಲೂರು ಭಾಗದಲ್ಲಿ ಮಳೆ
ಶಿವಮೊಗ್ಗ ತಾಲೂಕು ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಸಂಜೆ ರಾಶಿ ರಾಶಿ ಆಲಿಕಲ್ಲು ಬಿದ್ದಿದ್ದು ಜನರು ಅವುಗಳನ್ನು ಆರಿಸಿ ಖುಷಿ ಪಟ್ಟರು. ಕೆಲವೇ ಹೊತ್ತಿಗೆ ಭಾರಿ ಜೋರು ಮಳೆಯಾಗಿದೆ.
ಹೊಳೆಹೊನ್ನೂರಿನಲ್ಲಿ ಮಳೆ ಅಬ್ಬರ
ಹೊಳೆಹೊನ್ನೂರು ಭಾಗದಲ್ಲಿಯು ಮಳೆ ಅಬ್ಬರ ಜೋರಿತ್ತು. ಸುಮಾರು ಅರ್ಧ ಗಂಟೆ ಭಾರಿ ಗಾಳಿ ಸಹಿತ ಮಳೆಯಾಗಿದೆ. ವಿವಿಧೆಡೆ ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿದಿದೆ. ಚನ್ನಗಿರಿ ರಸ್ತೆಯ ಎಡಭಾಗದಲ್ಲಿ ಚರಂಡಿ ಇಲ್ಲ. ಹಾಗಾಗಿ ನೀರು ಹರಿದು ತೊಂದರೆ ಉಂಟಾಗಿತ್ತು. ಹೊಳೆಹೊನ್ನೂರು, ಸಿದ್ಲೀಪುರ, ಸನ್ಯಾಸಿಕೋಡಮಗ್ಗೆ ಗ್ರಾಮದ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಲೈನ್ ಮೇಲೆ ಮರದ ಕೊಂಬೆಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿತ್ತು.
ತೀರ್ಥಹಳ್ಳಿಯಲ್ಲಿ ಟ್ರಾಫಿಕ್ ಜಾಮ್
ಇನ್ನು, ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು ಒಂದು ಗಂಟೆಗು ಹೆಚ್ಚು ಹೊತ್ತು ಭಾರಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ಆಗುಂಬೆ ರಸ್ತೆಯ ಕಟ್ಟಡದ ಮೇಲಿದ್ದ ಜಾಹೀರಾತು ಫಲಕ ತುಂಡಾಗಿದೆ. ಪಕ್ಕದ ಕಟ್ಟಡದ ಮೇಲೆ ವಾಲಿಕೊಂಡಿದೆ. ಈ ಫಲಕ ರಸ್ತೆಗೆ ಬಿದ್ದಿದ್ದರೆ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಬಾಳೆಬೈಲಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಬಹು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.
ಗೂಡ್ಸ್ ವಾಹನದ ಮೇಲೆ ಬಿದ್ದ ಮರ
ರಿಪ್ಪನ್ಪೇಟೆ ಸುತ್ತಾಮುತ್ತಾ ಕೂಡ ಭಾರಿ ಮಳೆಯಾಗಿದೆ. ಶಬರೀಶ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಟಾಟಾ ಏಸ್ ಗೂಡ್ಸ್ ವಾಹನದ ಮೇಲೆ ತೆಂಗಿನ ಮರ ಬಿದ್ದಿದೆ. ಭಾರಿ ಗಾಳಿಯಿಂದಾಗಿ ತೆಂಗಿನ ಮರ ಬುಡಮೇಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಜಿಲ್ಲೆಯ ವಿವಿಧೆಡೆ ಕರೆಂಟ್ ಕಟ್
ಭಾರಿ ಗಾಳಿ, ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು. ಹಲವು ಗ್ರಾಮಗಳಲ್ಲಿ ಈತನಕ ವಿದ್ಯುತ್ ಪೂರೈಕೆ ಪುನಾರಂಭವಾಗಿಲ್ಲ. ಅಲ್ಲಲ್ಲಿ ವಿದ್ಯುತ್ ಲೈನ್ ಮೇಲೆ ಮರದ ರೆಂಬೆಗಳು ಬಿದ್ದು ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗಿದೆ. ಮೆಸ್ಕಾಂ ಸಿಬ್ಬಂದಿ ಲೈನ್ ಪರಿಶೀಲನೆ ನಡೆಸಿ ರಿಪೇರಿ ಕಾರ್ಯದಲ್ಲಿ ತೊಡಿಗಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ ಚನ್ನಬಸಪ್ಪ ಅಂಡ್ ಸನ್ಸ್ ಶೋರೂಂ, ಏನೇನಿರುತ್ತೆ? ಯಾವಾಗ ಶುರು?
ಅಡಿಕೆ, ಮಾವು ಬೆಳೆಗಾರರಿಗೆ ಆತಂಕ
ಆಲಿಕಲ್ಲು, ಜೋರು ಗಾಳಿ ಸಹಿತ ಭಾರಿ ಮಳೆ ಜಿಲ್ಲೆಯ ಅಡಿಕೆ ಮತ್ತು ಮಾವು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಆಲಿಕಲ್ಲು ಮಳೆ ಅಡಿಕೆ ಹೂವು ಮತ್ತು ಹಿಂಗಾರಕ್ಕೆ ಪೆಟ್ಟು ಕೊಟ್ಟಿದೆ. ಹಲವೆಡೆ ಹೂವು ಮತ್ತು ಹಿಂಗಾರ ಉದುರಿದ್ದು, ಬೆಳೆಗಾರರಿಗೆ ತಲೆನೋವು ತಂದಿದೆ. ಇತ್ತ ಮಾವಿನ ಈಚು ಮತ್ತು ಕಾಯಿ ಉದುರಿದ್ದು ರೈತರು ಕಂಗಾಲಾಗಿದ್ದಾರೆ.

LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು














