ಶಿವಮೊಗ್ಗ: ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ಇಂಡಿಗೋ ಏರ್ಲೈನ್ಸ್ (Indigo Airlines) ಸಿಬ್ಬಂದಿ ಒಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಭದ್ರಾವತಿಯ ನಿವಾಸಿ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣದ ಇಂಡಿಗೋ ಏರ್ಲೈನ್ಸ್ನ ಗ್ರೌಂಡ್ ಹ್ಯಾಂಡ್ಲಿಂಗ್ ವಿಭಾಗದ ಉದ್ಯೋಗಿ ದರ್ಶನ್ ನಾಗಾರಾಜ ಎಂಬುವವರು ಹಲ್ಲೆಗೊಳಗಾಗಿದ್ದಾರೆ.
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಿಬೀಳು ಗ್ರಾಮದ ಬಳಿ ಘಟನೆ ನಡೆದಿದೆ. ಮಾರ್ಚ್ 27ರಂದು ಸಂಜೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ ಮುಗಿಸಿ ದರ್ಶನ್ ನಾಗಾರಾಜ ಅವರು ತಮ್ಮ ಸಹೋದ್ಯೋಗಿ ಗುರುಪ್ರಸಾದ್ ಅವರೊಂದಿಗೆ ಬೈಕ್ನಲ್ಲಿ ದೊಡ್ಡಿಬೀಳು ಗ್ರಾಮದ ರಸ್ತೆಯ ಮೂಲಕ ಭದ್ರಾವತಿಗೆ ತೆರಳುತ್ತಿದ್ದರು.

ಇದನ್ನೂ ಓದಿ – ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್ಗೆ ಕಾದಿತ್ತು ಶಾಕ್, ಆಗಿದ್ದೇನು?
ಈ ವೇಳೆ ಬೈಕ್ನಲ್ಲಿ ಬೆನ್ನಟ್ಟಿ ಬಂದ ಮೂವರು ಅಪರಿಚಿತರು ಇವರನ್ನು ಅಡ್ಡಗಟ್ಟಿದ್ದಾರೆ. ಕಾರಣವಿಲ್ಲದೆ ದರ್ಶನ್ ನಾಗಾರಾಜ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಿಡಿಗೇಡಿಗಳು, ದೊಣ್ಣೆಯಿಂದ ದರ್ಶನ್ ನಾಗಾರಾಜ ಅವರ ತಲೆ ಮತ್ತು ಬೆನ್ನಿಗೆ ಹೊಡೆದಿದ್ದಾರೆ. ಇನ್ನೊಂದು ಬಾರಿ ಈ ರಸ್ತೆಯಲ್ಲಿ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಕಂಡರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


