ಯಡಿಯೂರಪ್ಪ ವಿಡಿಯೋ ಲೀಕ್ ಮಾಡಿದ್ದು ಅವರಿಬ್ಬರೆ ಇರಬೇಕು, ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಟಾಂಗ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 5 ನವೆಂಬರ್ 2019

ಚುನಾಯಿತ ಪ್ರತಿನಿಧಿಗಳನ್ನು ಆಮಿಷ ನೀಡಿ ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೇರಿ ಸಂವಿಧಾನಕ್ಕೆ ದ್ರೋಹ ಬಗೆದ ಬಿಜೆಪಿಯ ಅನೈತಿಕ ಸರ್ಕಾರ ಕೂಡಲೇ ತೊಲಗಬೇಕು. ಕೇಂದ್ರದ ಗೃಹಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಂವಿಧಾನಕ್ಕೆ ದ್ರೋಹ ಬಗೆದಿದ್ದು ಸಂವಿಧಾನದ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಚೈತನ್ಯ ಸಮಾವೇಶದಲ್ಲಿ ಮಾತನಾಡಿ, ಪ್ರವಾಹ ಬಂದು ೩ ತಿಂಗಳಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಂದಿಸದೆ ಸುಳ್ಳು ಹೇಳಿ ಕಾಲ ತಳ್ಳಿದೆ ಎಂದರು.

ನೂರು ದಿನದಲ್ಲಿ ದಾಳಿ, ವರ್ಗಾವಣೆ ದಂಧೆ

ನೂರು ದಿನಗಳಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ಐಟಿ ದಾಳಿ ಮಾಡಿಸುತ್ತಾ ಬೆದರಿಕೆಯೊಡ್ಡಿ ದ್ವೇಷದ ರಾಜಕಾರಣ ಮಾಡಿದ್ದು ಮತ್ತು ವರ್ಗಾವಣೆ ದಂಧೆ ಮಾಡಿದ್ದು ಮಾತ್ರ ಬಿಜೆಪಿಯ ಸಾಧನೆಯಾಗಿದೆ . ೫ ವರ್ಷ ಸದೃಢ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಸರ್ಕಾರ ಕಾಂಗ್ರೆಸ್‌ನದು. ಆದರೆ ಸುಳ್ಳು ಭರವಸೆ ನೀಡುತ್ತಾ ಐದೂವರೆ ವರ್ಷದಲ್ಲಿ ಉದ್ಯೋಗ ಸೃಷ್ಟಿ ಮಾಡದೆ, ಕೋಟ್ಯಂತರ ಯುವಕರ ಉದ್ಯೋಗ ಕಸಿದುಕೊಂಡು ನಿರುದ್ಯೋಗಿಗಳನ್ನಾಗಿ ಮಾಡಿದ ಕೀರ್ತಿ ಮೋದಿ ಸರ್ಕಾರದ್ದು ಎಂದರು.

ಯಡಿಯೂರಪ್ಪಗೆ ಆಗಲು ಜನಾದೇಶ ಸಿಕ್ಕಿರಲಿಲ್ಲ

೨೦೦೮ರಲ್ಲೂ ಯಡಿಯೂರಪ್ಪನವರಿಗೆ ಜನಾದೇಶ ಸಿಕ್ಕಿರಲಿಲ್ಲ. ೮ ಜನ ಎಂಎಲ್‌ಎಗಳನ್ನು ೨೫-೩೦ ಕೋಟಿ ಕೊಟ್ಟು ಕೊಂಡುಕೊಂಡರು. ಈಗಲೂ ಅದನ್ನೇ ಮಾಡಿದ್ದಾರೆ. ಇದನ್ನು ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ೧೭ ಜನರ ತ್ಯಾಗದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಕೋರ್‌ಕಮಿಟಿ ಸಭೆಯಲ್ಲಿ ತಿಳಿಸಿದ್ದಾರೆ. ಆ ವಿಡಿಯೋ ಲೀಕ್ ಆಗಿದೆ. ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಕಟೀಲ್ ಅಥವಾ ಸವದಿ ಅವರೇ ಕಾಲೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
೧೯೬೭ರ ಉಪಚುನಾವಣೆ ನಂತರ ಪಕ್ಷಾಂತರ ಪ್ರವೃತ್ತಿ ಹೆಚ್ಚಾಗಿತ್ತು. ಇದನ್ನ ನಿಲ್ಲಿಸಲು ರಾಜೀವ್ ಗಾಂಧಿ ಪ್ರಧಾನಿಯಾದಾಗ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದರು.

74927901 965555590472528 6507438695451197440 n.png? nc cat=104& nc oc=AQn2w oNN8CtsITkr3X7dEo16F b88MXywety pHpYXpxuFbEJnSmYXIzD7DViXTvGs& nc ht=scontent.fblr11 1

ಶಾಸಕರಿಗೆ ಆಮಿಷ ನೀಡಿ ಚುನಾಯಿತ ಸರ್ಕಾರವನ್ನ ಉರುಳಿಸಿದ್ದಾರೆ. ಇದು ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ. ಅಮಿತ್ ಶಾ ಹಾಗೂ ಯಡಿಯೂರಪ್ಪ ಸೇರಿ ಸರ್ಕಾರ ಬೀಳಿಸಿದ್ದಾರೆ. ಅವರು ಅಧಿಕಾರದಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ನನ್ನ ಪ್ರಕಾರ ಈಗಲೂ ಯಡಿಯೂರಪ್ಪನವರು ರಾಜಿನಾಮೆ ನೀಡಬೇಕಾಗುತ್ತದೆ. ಮಾಜಿ ಸ್ಪೀಕರ ರಮೇಶ್ ಕುಮಾರ್ ನಿರ್ಧಾರವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಭರವಸೆ ಇದೆ. ಪಕ್ಷಕ್ಕೆ ದ್ರೋಹ ಬಗೆದವರನ್ನ ಜನರು ಗೆಲ್ಲಿಸಬಾರದು ಎಂದು ಗುಡುಗಿದರು.

ಸಂವಿಧಾನ ಓದಿದ್ದಾರಾ ಯಡಿಯೂರಪ್ಪ, ಈಶ್ವರಪ್ಪ?

ಯಡಿಯೂರಪ್ಪ ಹಾಗೂ ಈಶ್ವರಪ್ಪ ಸಂವಿಧಾನದ ಅಶಯ ಹಾಗೂ ಉದ್ದೇಶವನ್ನ ಓದಿಕೊಂಡಿಲ್ಲ.. ಸಂವಿಧಾನ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಬಿಜೆಪಿಯವರಿಂದ ಅಲ್ಲ. ನಮ್ಮ ಸರ್ಕಾರ ಜಾರಿಗೂಳಿಸಿದ ಆನೇಕ ಯೋಜನೆಯನ್ನು ರದ್ದು ಮಾಡಲು ಯಡಿಯೂರಪ್ಪ ಹೊರಟಿದ್ದಾರೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳುತ್ತಾರೆ. ಆದರೆ ಅವರು ಮಾಡುತ್ತಿರುವುದೆಲ್ಲ ದ್ವೇಷದ ರಾಜಕಾರಣ. ಅದನ್ನು ಬಿಟ್ಟು ೧೦೦ ದಿನಗಳಲ್ಲಿ ಬೇರೆನೂ ಮಾಡಿಲ್ಲ.

73539676 965555583805862 6429928258178908160 n.png? nc cat=108& nc oc=AQlTc nWyB3hflYDMn7D8AJoaDk5YNBxJgdmsDNmxFpiEeLR5L215QxgNLDLK5VMKiU& nc ht=scontent.fblr11 1

ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡಿಲ್ಲ. ಪ್ರಮಾಣವಚನ ಸಂದರ್ಭ ದಲ್ಲಿ ಮಾತ್ರ ಹಸಿರುಶಾಲು ಹಾಕಿಕೊಂಡು ರೈತ ನಾಯಕ ಎಂದು ತಾನೇ ಹೇಳಿಕೊಳ್ಳುತ್ತಾರೆ. ಯಡಿಯೂರಪ್ಪ ನವರು ತಂತಿ ಮೇಲೆ ನಡೆಯುತ್ತೇನೆ ಎಂದು ಹೇಳಿದಾಗ ರಾಜಿನಾಮೇ ಕೊಡಿ ಎಂದು ಹೇಳಿದ್ದಕ್ಕೆ ನನಗೆ ದುರಂಹಕಾರಿ ಎಂದರು. ಇದೇ ಯಡಿಯೂರಪ್ಪ ಸಿಎಂ ಅಗಿದ್ದಾಗ ಸಾಲ ಮನ್ನಾ ಮಾಡಲಿಲ್ಲ. ಸಾಲಮನ್ನಾ ಮಾಡಿ ಎಂದರೆ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲ ಎಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಅಗಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಜೆಟ್ ಗಾತ್ರ ೨.೯ ಲಕ್ಷ ಕೋಟಿಗೆ ಏರಿಸಲಾಗಿತ್ತು. ಆದ್ರೆ ಬಿಜೆಪಿಯವರು ಖಜಾನೆ ಲೂಟಿಯಾಗಿತ್ತು ಎಂದು ಹೇಳುತ್ತಾರೆ. ನಳಿನ್ ಕುಮಾರ್ ಕಟೀಲು ಚೈಲ್ಡಿಶ್, ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ.ಸಂಗಮೇಶ್ವರ್, ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಮಂಜುನಾಥ ಭಂಡಾರಿ ಸೇರಿದಂತೆ ಹಲವು ಮುಖಂಡರು ಇದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment