VISL ಕಾರ್ಖಾನೆಯಲ್ಲಿ ಅವಘಡ, ಕಾರ್ಮಿಕ ಸಾವು, ಆಗಿದ್ದೇನು?

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಬ್ಬಿಣದ ಬಿಲೆಟ್ ಕಾಲು ಹಾಗೂ ತಲೆಗೆ ಬಡಿದು ಕಾರ್ಮಿಕರೊಬ್ಬರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಗುತ್ತಿಗೆ ಕಾರ್ಮಿಕರ ಸಂಘದ ಮಾಜಿ ಉಪಾಧ್ಯಕ್ಷ ವಿನೋದ್(36) ಮೃತ.

ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ಆಗಿದ್ದೇನು?

ವಿವಿಧ ಕಾರ್ಖಾನೆಗಳಿಂದ ವಿಐಎಸ್‌ಎಲ್‌ಗೆ ಕಬ್ಬಿಣದ ಬಿಲೆಟ್‌ ಬಂದಿತ್ತು. ಸೋಮವಾರ ಎರಡನೇ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿನೋದ್‌ ಅವರು ಕಬ್ಬಿಣದ ಬಿಲೆಟ್‌ಗಳನ್ನು ಅನ್‌ಲೋಡ್‌ ಮಾಡುತ್ತಿದ್ದರು. ಕ್ರೈನ್‌ ಮೂಲಕ ಬಿಲೆಟ್‌ ಇಳಿಸುವಾಗ ಚೈನ್‌ ತುಂಡಾಗಿದೆ. ಅದು ವಿನೋದ್‌ ಅವರ ಮೇಲೆ ಬಿದ್ದಿತ್ತು. ಒಂದು ಟನ್‌ಗಿಂತಲು ಹೆಚ್ಚಿನ ತೂಕದ ಬಿಲೆಟ್‌ ಬಿದ್ದು ವಿನೋದ್‌ ಅವರ ಕಲು ಮತ್ತು ತಲೆಗೆ ಪೆಟ್ಟಾಗಿತ್ತು.

ಇದನ್ನೂ ಓದಿ : VISL ನಿವೃತ್ತ ಕಾರ್ಮಿಕರ ಚುನಾವಣೆ, ಯಾರೆಲ್ಲ ಸ್ಪರ್ಧಿಸಿದ್ದಾರೆ? ಯಾವಾಗ ಎಲೆಕ್ಷನ್?

VISL ಕಾರ್ಖಾನೆಯಲ್ಲಿ ಅವಘಡ, ಕಾರ್ಮಿಕ ವಿನೋದ್‌ ಸಾವು
ಎಡಚಿತ್ರದಲ್ಲಿ ಕಾರ್ಮಿಕ ವಿನೋದ್‌. ಬಲಚಿತ್ರದಲ್ಲಿ ಸಂಸದ ಬ.ವೈ.ರಾಘವೇಂದ್ರ ಸರ್ಜಿ ಆಸ್ಪತ್ರೆಗೆ ಆಗಮಿಸಿ ಕಾರ್ಮಿಕ ವಿನೋದ್‌ ಅವರ ಅಂತಿಮ ದರ್ಶನ ಪಡೆದರು.

ಕೂಡಲೆ ಭದ್ರಾವತಿ ಆಸ್ಪತ್ರೆಗೆ ದಾಖಲು

ಘಟನೆ ಬೆನ್ನಿಗೆ ಇತರೆ ಕಾರ್ಮಿಕರು ವಿನೋದ್‌ ಅವರನ್ನು ಕೂಡಲೆ ಭದ್ರಾವತಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರಿಂದ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಶಿವಮೊಗ್ಗದ ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ವಿನೋದ್‌ ಕೊನೆಯುಸಿರೆಳೆದಿದ್ದಾರೆ ಎಂದು ಕಾರ್ಮಿಕರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.

VISL ಕಾರ್ಖಾನೆಯಲ್ಲಿ ಅವಘಡ, ಕಾರ್ಮಿಕ ವಿನೋದ್‌ ಸಾವು
ಕಾರ್ಮಿಕ ವಿನೋದ್‌ ಅವರ ಕುರಿತು ಅವರ ಸಹೋದ್ಯೋಗಿಗಳು ಮಾತನಾಡಿದರು

‘ಮಗಳನ್ನು ನೋಡಬೇಕು ಅನಿಸುತ್ತಿದೆ’

ಶಿವಮೊಗ್ಗದ ಆಸ್ಪತ್ರೆಗೆ ವಿನೋದ್‌ ಅವರನ್ನು ಕರೆತರುವಾಗ ಅವರು ತಮ್ಮ ಪುಟ್ಟ ಮಗಳನ್ನು ನೋಡಬೇಕು ಎಂದು ಹಂಬಲಿಸುತ್ತಿದ್ದರು. ಆಸ್ಪತ್ರೆ ಸಮೀಪಕ್ಕೆ ಬರುವಾಗಲು ‘ಮಗಳನ್ನು ಒಮ್ಮೆ ನೋಡಬೇಕು ಅನಿಸುತ್ತಿದೆ’ ಎಂದು ಹೇಳಿದ್ದರು ಎಂದು ಅವರೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದ ಸಹೋದ್ಯೋಗಿಗಳು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿ ಗದ್ಗದಿತರಾದರು.

ಇದನ್ನೂ ಓದಿ : VISLನಲ್ಲಿ ದಿಢೀರ್‌ ನಡೆಯಿತು ಎರಡನೇ ಮೀಟಿಂಗ್‌, ಕುಮಾರಸ್ವಾಮಿ ನೀಡಿದ ಭರವಸೆ ಏನು?

VISL ಕಾರ್ಖಾನೆಯಲ್ಲಿ ಅವಘಡ, ಕಾರ್ಮಿಕ ವಿನೋದ್‌ ಸಾವು
ಸರ್ಜಿ ಆಸ್ಪತ್ರೆಯಲ್ಲಿ ಕಾರ್ಮಿಕ ವಿನೋದ್‌ ಅವರ ಅಂತಿಮ ದರ್ಶನ ಪಡೆದ ಸಹೋದ್ಯೋಗಿಗಳು.

ಆಸ್ಪತ್ರೆಗೆ ಸಂಸದ ರಾಘವೇಂದ್ರ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದ್ರ ಸರ್ಜಿ ಆಸ್ಪತ್ರೆಗೆ ದೌಡಾಯಿಸಿದರು. ವೈದ್ಯರು ಮತ್ತು ವಿನೋದ್‌ ಅವರ ಸಹೋದ್ಯೋಗಿಗಳ ಜೊತೆಗೆ ಚರ್ಚೆ ನಡೆಸಿದರು. ವಿನೋದ್‌ ಅವರ ಕುಟುಂಬದ ಕುರಿತು ಮಾಹಿತಿ ಪಡೆದರು.

ವಿನೋದ್‌ ಅವರು ಕಾರ್ಮಿಕರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದರು. ಅಪಘಾತದ ವೇಳೆ ಕಬ್ಬಿಣದ ಸ್ಲ್ಯಾಬ್‌ಗಳು ಬೀಳುತ್ತಿದ್ದಾಗ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಇದು ಅತ್ಯಂತ ದುಃಖದ ಸಂಗತಿ.

ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

ಕಣ್ಣೀರಾದ ಕಾರ್ಮಿಕರು, ಪರಿಚಿತರು

ವಿನೋದ್‌ ಅವರ ಅಗಲಿಕೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಐಎಸ್‌ಎಲ್‌ನ ಕಾರ್ಮಿಕರು, ವಿನೋದ್‌ ಅವರ ಪರಿಚಿತರು ಸರ್ಜಿ ಆಸ್ಪತ್ರೆಗೆ ಆಗಮಿಸಿದ್ದರು. ವಿನೋದ್‌ ಅವರನ್ನು ನೆನೆದು ಕಣ್ಣೀರಾದರು.

ಇಲ್ಲಿದೆ ವಿಡಿಯೋ

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 28, 2026 at 9:07 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 28, 2026

Leave a Comment