ವಿನೋದ್‌ಗಾಗಿ ಕಂಬನಿ ಮಿಡಿದ ಭದ್ರಾವತಿ, VISLನಿಂದ ಮಹತ್ವದ ನಿರ್ಧಾರ ಪ್ರಕಟ

ಭದ್ರಾವತಿ: ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕ ವಿನೋದ್‌ ಅವರ ಪತ್ನಿಗೆ ಅನುಕಂಪದ ಆಧಾರದಲ್ಲಿ ಕಾಯಂ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ವಿಐಎಸ್‌ಎಲ್‌ ಅಧಿಕಾರಿಗಳು ಈ ಕುರಿತ ಪತ್ರವನ್ನು ವಿನೋದ್‌ ಅವರ ಪತ್ನಿ ಚೈತ್ರ ಅವರಿಗೆ ಹಸ್ತಾಂತರಿಸಿದ್ದಾರೆ.

ಕಂಬನಿ ಮಿಡಿದ ಭದ್ರಾವತಿ

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಬ್ಬಿಣದ ಬಿಲೆಟ್ ಬಿದ್ದು ಗುತ್ತಿಗೆ ಕಾರ್ಮಿಕ ವಿನೋದ್‌ (35) ಮೃತಪಟ್ಟಿದ್ದಾರೆ. ಭದ್ರಾವತಿಯ ಜನ್ನಾಪುರದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಐಎಸ್‌ಎಲ್‌ ಅಧಿಕಾರಿಗಳು, ಕಾರ್ಮಿಕರು, ನಿವೃತ್ತ ಕಾರ್ಮಿಕರು ಸೇರಿ ದೊಡ್ಡ ಸಂಖ್ಯೆಯ ಜನರು ಅಂತಿಮ ದರ್ಶನ ಪಡೆದರು.

ಶಾಸಕ ಬಿ.ಕೆ.ಸಂಗಮೇಶ್ವರ, ಕಾಂಗ್ರೆಸ್‌ ನಾಯಕ ಬಿ.ಎಸ್‌.ಗಣೇಶ್‌, ಜೆಡಿಎಸ್‌ ನಾಯಕರಾದ ಶಾರದಾ ಅಪ್ಪಾಜಿಗೌಡ, ಕರುಣಾಮೂರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ಧರ್ಮಪ್ರಸಾದ್‌ ಸೇರಿ ಹಲವರು ಅಂತಿಮ ದರ್ಶನ ಪಡೆದರು.  

ವಿನೋದ್‌ಗಾಗಿ ಕಂಬನಿ ಮಿಡಿದ ಭದ್ರಾವತಿ, ಮಹತ್ವದ ನಿರ್ಧಾರ ಪ್ರಕಟಿಸಿದ VISL
ಕಂಬನಿ ಮಿಡಿದ ಭದ್ರಾವತಿ: ವಿನೋದ್‌ ಅಂತಿಮ ದರ್ಶನ ಪಡೆದ ಭದ್ರಾವತಿಯ ಜನಪ್ರತಿನಿಧಿಗಳು, ವಿಐಎಸ್‌ಎಲ್‌ ಅಧಿಕಾರಿಗಳು ಮತ್ತು ಜನರು | Photo By : Shivamogga Live

ಪರಿಹಾರಕ್ಕೆ ಆಗ್ರಹಿಸಿ ಸಭೆ

ವಿನೋದ್‌ ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ. ಇವರ ಬದುಕಿಗೆ ಆಸರೆಯಾಗಬೇಕು ಎಂದು ಆಗ್ರಹಿಸಿ ಪರಿಹಾರಕ್ಕೆ ಒತ್ತಾಯಿಸಿ ಸಭೆ ನಡೆಯಿತು. ಜನಪ್ರತಿನಿಧಿಗಳು, ಕಾರ್ಮಿಕ ಸಂಘಟನೆಳ ಪ್ರಮುಖರು, ಗುತ್ತಿಗೆದಾರರು ಮತ್ತು ವಿಐಎಸ್‌ಎಲ್‌ ಕಾರ್ಖಾನೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ವಿನೋದ್‌ ಅವರ ಪತ್ನಿ ಚೈತ್ರಾ ಅವರಿಗೆ ಉದ್ಯೋಗ ನೀಡುವ ಮತ್ತು ಪರಿಹಾರ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

QUOTE LOGO NEW jpg

ವಿನೋದ್‌ ಅವರಿಗೆ ಏಳೆಂಟು ವರ್ಷದ ಮಗಳಿದ್ದಾಳೆ. ತಾಯಿ, ಮಗಳ ಜೀವನದ ಅನುಕೂಲಕ್ಕಾಗಿ ಗುತ್ತಿಗೆದಾರರು ₹8 ಲಕ್ಷ ಪರಿಹಾರ ನೀಡಲು ಒಪ್ಪಿದ್ದಾರೆ. ವಿಐಎಸ್‌ಎಲ್‌ ಕಾರ್ಖಾನೆ ಅಧಿಕಾರಿಗಳು ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

– ಶಾರದಾ ಅಪ್ಪಾಜಿಗೌಡ, ಜೆಡಿಎಸ್‌ ನಾಯಕಿ

ಅನುಕಂಪದ ಆಧಾರದಲ್ಲಿ ಉದ್ಯೋಗ

ಸಭೆ ಬಳಿಕ ವಿಐಎಸ್‌ಎಲ್‌ ಅಧಿಕಾರಿಗಳು ಜನ್ನಾಪುರದಲ್ಲಿರುವ ವಿನೋದ್‌ ಅವರ ಮನೆ ಬಳಿ ಆಗಮಿಸಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ವಿನೋದ್‌ ಅವರ ಪತ್ನಿ ಚೈತ್ರಾ ಅವರಿಗೆ ಅನುಕಂಪದ ಆಧಾರದಲ್ಲಿ ಕಾಯಂ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಅಲ್ಲದೆ ಪತ್ರದಲ್ಲಿ ಹಲವು ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಲಾಗಿದೆ.

  • ಕಂಪನಿಯ ನಿಯಮದ ಪ್ರಕಾರ, ಮೃತರ ಪತ್ನಿ ಅಥವಾ ಅವರು ಸೂಚಿಸಿದ ಅವಲಂಬಿತರಿಗೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕಾಯಂ ಉದ್ಯೋಗವನ್ನು ನೀಡಲಾಗುವುದು.
  • ಮೃತ ಕಾರ್ಮಿಕನಿಗೆ ಬರಬೇಕಾದ ಎಲ್ಲಾ ಬಾಕಿ ಮೊತ್ತವನ್ನು ಅವರ ಉದ್ಯೋಗದಾತರಿಂದ 15 ದಿನಗಳ ಒಳಗಾಗಿ ಕೊಡಿಸುವ ಜವಾಬ್ದಾರಿಯನ್ನು ಆಡಳಿತ ಮಂಡಳಿ ವಹಿಸಿಕೊಂಡಿದೆ.
ವಿನೋದ್‌ಗಾಗಿ ಕಂಬನಿ ಮಿಡಿದ ಭದ್ರಾವತಿ, ಮಹತ್ವದ ನಿರ್ಧಾರ ಪ್ರಕಟಿಸಿದ VISL
ಪರಿಹಾರದ ಪತ್ರ: ವಿನೋದ್‌ ಪತ್ನಿ ಚೈತ್ರಾ ಅವರಿಗೆ ಉದ್ಯೋಗದ ಭರವಸೆ ಪತ್ರ ಹಸ್ತಾಂತರಿಸಿದ ವಿಐಎಸ್‌ಎಲ್‌ ಅಧಿಕಾರಿಗಳು | Photo By : Shivamogga Live

ವಿಐಎಸ್‌ಎಲ್‌ನ ಸಿಜಿಎಂ ಹೆಚ್‌.ಆರ್‌ ಆಗಿರುವ ವಿಶ್ವನಾಥ್‌, ವರ್ಕ್ಸ್‌ ವಿಭಾಗದ ಜಿ.ಎಂ ಆಗಿರುವ ರವಿಚಂದ್ರನ್‌ ಅವರು ಉದ್ಯೋಗದ ಭರವಸೆ ಪತ್ರವನ್ನು ಹಸ್ತಾಂತರಿಸಿದರು.

QUOTE LOGO NEW jpg

ಈ ಅಪಘಾತದ ಕುರಿತು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗುತ್ತೆದೆ. ಕೆಲಸದ ಸ್ಥಳದ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗುವುದು.

ವಿಶ್ವನಾಥ್‌.ಬಿ, VISLನ ಸಿಜಿಎಂ ಹೆಚ್‌.ಆರ್‌

ವಿಐಎಸ್‌ಎಲ್‌ ಕಾರ್ಖಾನೆ ಒಳಗೆ ವ್ಯಾಗನ್‌ನಿಂದ ಬಿಲ್ಲೆಟ್‌ಗಳನ್ನು ಇಳಿಸುವ ಸಂದರ್ಭ ಅವಘಡ ಸಂಭವಿಸಿತ್ತು. ಗುತ್ತಿಗೆ ಕಾರ್ಮಿಕ ವಿನೋದ್‌ ಅವರ ಮೇಲೆ ಬಿಲ್ಲೆಟ್‌ ಬಿದ್ದು ತೀವ್ರ ಗಾಯಗೊಂಡಿದ್ದರು. ಕೂಡಲೆ ಅವರನ್ನು ಭದ್ರಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸೋಮವಾರ ರಾತ್ರಿ ಸರ್ಜಿ ಆಸ್ಪತ್ರೆಯಲ್ಲಿ ವಿನೋದ್‌ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ : VISL ಕಾರ್ಖಾನೆಯಲ್ಲಿ ಅವಘಡ, ಕಾರ್ಮಿಕ ಸಾವು, ಆಗಿದ್ದೇನು?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 28, 2026 at 5:22 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 28, 2026

Leave a Comment