ಶಿವಮೊಗ್ಗ: ವಿಮಾನ ನಿಲ್ದಾಣವನ್ನು (Shivamogga Airport) ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ಹಿನ್ನೆಲೆ ಐಎಎಸ್ ಅಧಿಕಾರಿ ವಿಶಾಲ್ ಅವರನ್ನು ರಾಜ್ಯ ಸರ್ಕಾರ ಚರ್ಚೆಗೆ ದೆಹಲಿಗೆ ಕಳುಹಿಸಿತ್ತು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಚರ್ಚೆ ವೇಳೆ ಎರಡು ಪ್ರಮುಖ ವಿಚಾರಗಳನ್ನು ರಾಜ್ಯ ಸರ್ಕಾರ ಪ್ರಸ್ತಾಪ ಮಾಡಿದೆ. ವಿಮಾನ ನಿಲ್ದಾಣಕ್ಕೆ ಈವರೆಗು ಆಗಿರುವ ಖರ್ಚು – ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆಯೆ ಎಂದು ಕೇಳಿದ್ದಾರೆ. ವಿಮಾನ ನಿಲ್ದಾಣವನ್ನು ಖಾಸಗಿ ನಿರ್ವಾಹಣೆಗೆ ವಹಿಸಬಹುದೆ ಎಂದು ಚರ್ಚಿಸಿದ್ದಾರೆ ಎಂದರು.

VGF ಪತ್ರ ಕೊಡದ ರಾಜ್ಯ ಸರ್ಕಾರ
ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತಿದ್ದ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಯೋಜನೆ ಜುಲೈ 2025ಕ್ಕೆ ಕೊನೆಗೊಂಡಿದೆ. ಇದನ್ನು ಮುಂದುವರೆಸುವ ಕುರಿತು ರಾಜ್ಯ ಸರ್ಕಾರ ಪತ್ರ ನೀಡಲು ವಿಳಂಬ ಮಾಡುತ್ತಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಮಾತನಾಡಿದ್ದಾರೆ. ಆದರೆ ಈತನಕ ಪತ್ರ ನೀಡಿಲ್ಲ. ಬೀದರ್ ವಿಮಾನ ನಿಲ್ದಾಣಕ್ಕೆ ವಿಜಿಎಫ್ ಪತ್ರ ನೀಡಲಾಗಿದೆ ಎಂದರು.


ರಾಜಧಾನಿಗೆ ವಿಮಾನಯಾನ ಸೇವೆ ನೀಡುವುದು ಉಡಾನ್ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಯಡಿಯೂರಪ್ಪ ಅವರ ಸರ್ಕಾರ ಶಿವಮೊಗ್ಗ – ಬೆಂಗಳೂರು ವಿಮಾನಕ್ಕೆ ರಾಜ್ಯ ಸರ್ಕಾರದ ವಿಜಿಎಫ್ ಯೋಜನೆ ಮೂಲಕ ಪ್ರತಿ ಟಿಕೆಟ್ಗೆ ₹500 ಸಹಾಯಧನ ನೀಡುತ್ತಿತ್ತು. ಈ ಯೋಜನೆ ಮುಕ್ತಾಯವಾಗಿ ಒಂದು ವರ್ಷವಾಗಿದೆ. ಯೋಜನೆ ಮುಂದುವರೆಸುವ ಕುರಿತು ಮನವಿ ಮಾಡಿದರು ಈ ತನಕ ಪ್ರಯೋಜನವಾಗಿಲ್ಲ ಎಂದು ಸಂಸದ ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಪ್ರತಿ ಹೆಕ್ಟೇರ್ಗೆ ₹1 ಲಕ್ಷ ಪರಿಹಾರ ನೀಡುವಂತೆ ಸಂಸದ ರಾಘವೇಂದ್ರ ಆಗ್ರಹ
ಇಂಡಿಗೋ ನಿಲುಗಡೆ ತಾತ್ಕಾಲಿಕ
ಇಂಡಿಗೋ ವಿಮಾನ ಸೇವೆ ಸ್ಥಗಿತ ತಾತ್ಕಲಿಕವಾದದ್ದು. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರೊಂದಿಗೆ ಮಾತುಕತೆ ನಡೆಸಿದೆ. ಅವರು ಕೂಡ ವಿಮಾನ ಸೇವೆಗಳ ಪುನಾರಂಭಕ್ಕೆ ಪರ್ಯಾಯ ಮಾರ್ಗ ಹುಡುಕುವ ಭರವಸೆ ನೀಡಿದ್ದಾರೆ ಎಂದರು ತಿಳಿಸಿದರು.
ನಮ್ಮ ವಿಮಾನ ನಿಲ್ದಾಣ ಮಧ್ಯ ಕರ್ನಾಟಕದ ಅತ್ಯಂತ ಪ್ರಮುಖವಾದದ್ದಾಗಿದೆ. ಈಚೆಗೆ ಗಾಂಧಿ ಬಜಾರ್ನ ಯುವತಿಯೊಬ್ಬರನ್ನು ತುರ್ತು ಚಿಕಿತ್ಸೆಗೆ ಮುಂಬೈಗೆ ಕರೆದೊಯ್ಯಬೇಕಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಏರ್ಲಿಫ್ಟ್ ಮಾಡಲಾಯಿತು. ಇದೇ ರೀತಿ ಹಲವು ಕಾರಣಕ್ಕೆ ಈ ವಿಮಾನ ನಿಲ್ದಾಣ ಪ್ರಾಮುಖ್ಯ ಪಡೆದುಕೊಂಡಿದೆ.
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ನೈಟ್ ಲ್ಯಾಂಡಿಂಗ್ನಿಂದ ಅನುಕೂಲವಿದೆ
ನೈಟ್ ಲ್ಯಾಂಡಿಂಗ್ ಆರಂಭವಾದರೆ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಅನುಕೂಲ ಆಗಲಿದೆ. ಅದರೆ ಕಾಮಗಾರಿ ವಿಳಂಬವಾಯಿತು. ನೈಟ್ ಲ್ಯಾಂಡಿಂಗ್ ಟೆಂಡರ್ಗೆ ಮೂರು ತಿಂಗಳಾಯಿತು. ಕಾಮಗಾರಿ ಆರಂಭಕ್ಕೆ ಆರು ತಿಂಗಳಾಯಿತು. ಇಷ್ಟು ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಈತನಕ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.