ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ತಾಣ (Tourist spot) ಸಕ್ರೆಬೈಲು ಆನೆ ಬಿಡಾರಕ್ಕೆ (Sakrebyle Elephant Camp) ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ (Temporarily suspended) ಎಂದು ವನ್ಯಜೀವಿ ವಿಭಾಗದ ಡಿಎಫ್ಒ (DFO of Wildlife Division) ಪ್ರಸನ್ನಕೃಷ್ಣ ಪಟಗಾರ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೇ 18 ರಂದು ದುಬಾರೆ ಆನೆ ಶಿಬಿರದಲ್ಲಿ ಆನೆಯೊಂದು ಇನ್ನೊಂದು ಆನೆ ಮೇಲೆ ದಾಳಿ ಮಾಡಿತ್ತು. ಈ ಸಂದರ್ಭ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆ ಬೆನ್ನಿಗೆ, ಸಾರ್ವಜನಿಕರ ಸುರಕ್ಷತೆಯ (Public safety) ದೃಷ್ಟಿಯಿಂದ ಸಕ್ರೆಬೈಲು ಬಿಡಾರದಲ್ಲಿಯು ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಆನೆಗಳನ್ನು ದೂರದಿಂದ ವೀಕ್ಷಿಸಲು ಮಾತ್ರ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಆನೆ ಶಿಬಿರ ತಾತ್ಕಾಲಿಕ ಬಂದ್
ಆನೆ ಶಿಬಿರಗಳಲ್ಲಿ ಪ್ರವಾಸಿಗರ ನಿರ್ವಹಣೆ (Tourist management) ಕುರಿತು ಅರಣ್ಯ ಇಲಾಖೆಯು (Forest Department) ಹೊಸದಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಸಿದ್ಧಪಡಿಸುವಂತೆ ಅರಣ್ಯ ಸಚಿವರು ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಹೊಸ ಎಸ್ಒಪಿ ಸಿದ್ಧವಾಗಿ ಜಾರಿಗೆ ಬರುವವರೆಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸಕ್ರೆಬೈಲು ಆನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದರು.
ಪ್ರವಾಸಿಗರಿಗೆ ಸೂಚನೆ
ಶಿವಮೊಗ್ಗಕ್ಕೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಎಂದು ವನ್ಯಜೀವಿ ವಿಭಾಗದ ಡಿಎಫ್ಒ ಪ್ರಸನ್ನಕೃಷ್ಣ ಪಟಗಾರ ತಿಳಿಸಿದ್ದಾರೆ.

