ಶಿಕಾರಿಪುರ: ತಾಲ್ಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ಆತಂಕ ಮೂಡಿಸಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಜಂಟಿ ಸಮಾಲೋಚನಾ ಸಭೆ ಜರುಗಿತು.
ಸಭೆಯಲ್ಲಿ ತಹಶೀಲ್ದಾರರು, ವಲಯ ಅರಣ್ಯಾಧಿಕಾರಿಗಳು (ಆರ್ಎಫ್ಒ) ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯ ಜಮೀನುಗಳ ವಾಸ್ತವ ಸ್ಥಿತಿ ಮತ್ತು ಗಡಿರೇಖೆಯ ತಾಂತ್ರಿಕ ಲೋಪಗಳ ಕುರಿತು ಚರ್ಚಿಸಲಾಯಿತು.

ಇಲಾಖೆಗಳ ನಡುವಿನ ಗೊಂದಲ ನಿವಾರಿಸಲು ತಕ್ಷಣವೇ ಜಂಟಿ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಅರ್ಹ ಸಾಗುವಳಿ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಮುಕ್ತಗೊಳಿಸಲು ಮತ್ತು ಮಲೆನಾಡಿನ ರೈತರ ಹಿತರಕ್ಷಣೆಗೆ ಸರ್ಕಾರದ ಮಟ್ಟದಲ್ಲಿ ಕಟ್ಟುನಿಟ್ಟು ಕ್ರಮ ಕೈಗೊಳ್ಳಲು ಹಾಗೂ ರೈತರಿಗೆ ಅನ್ಯಾಯವಾಗದಂತೆ ಕಾನೂನಾತ್ಮಕ ಪ್ರಯತ್ನ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಂಸದ ಬಿ.ವೈ.ರಾಘವೇಂದ್ರ, ಪ್ರಮುಖರಾದ ಕೆ.ಎಸ್. ಗುರುಮೂರ್ತಿ ಸೇರಿ ಹಲವರು ಸಭೆಯಲ್ಲಿದ್ದರು.

