ಶಿವಮೊಗ್ಗ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೊಟ್ಟಮೊದಲು ಲ್ಯಾಂಡ್ ಆಗಿದ್ದ ಭಾರತೀಯ ವಾಯು ಸೇನೆಯ ವಿಶೇಷ ವಿಮಾನ ಪುನಃ ಶಿವಮೊಗ್ಗಕ್ಕೆ ಆಗಮಿಸಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದಿದ್ದ ಈ ವಿಮಾನ ಇವತ್ತು ಉಪ ರಾಷ್ಟ್ರಪತಿ ಅವರನ್ನು ಇಲ್ಲಿಂದ ಕರೆದೊಯ್ಯಲಿದೆ.
ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಇಂದು ದಾವಣಗೆರೆಗೆ ಭೇಟಿ ನೀಡಿದ್ದಾರೆ. ಇಲ್ಲಿನ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನ 75ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಸಂಜೆ 4 ಗಂಟೆಗೆ ಹೆಲಿಕಾಪ್ಟರ್ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಂಜೆ 4:10ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಾಯು ಸೇನೆಯ ವಿಶೇಷ ವಿಮಾನದಲ್ಲಿ ಗೋವಾಗೆ ತೆರಳಲಿದ್ದಾರೆ.

ಶಿವಮೊಗ್ಗಕ್ಕೆ ಬಂತು ವಿಶೇಷ ವಿಮಾನ
ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ವಾಯು ಸೇನೆಯ K 5012 ವಿಶೇಷ ವಿಮಾನದಲ್ಲಿ ಇಂದು ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿ ಆರ್ಟ್ ಆಫ್ ಲಿವಿಂಗ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಉಪ ರಾಷ್ಟ್ರಪತಿ ಅವರು ದಾವಣಗೆರೆಗೆ ತೆರಳಿದ್ದಾರೆ. ವಾಯು ಸೇವನೆಯ ವಿಶೇಷ ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ 12:45ಕ್ಕೆ ಶಿವಮೊಗ್ಗಕ್ಕೆ ಆಗಮಿಸಿದೆ. ಇಲ್ಲಿಂದ ಸಂಜೆ ಉಪ ರಾಷ್ಟ್ರಪತಿ ಅವರನ್ನು ಕರೆದೊಯ್ಯಲಿದೆ.
ಶಿವಮೊಗ್ಗದಲ್ಲಿ ಮೊದಲು ಲ್ಯಾಂಡ್ ಆಗಿದ್ದ ವಿಮಾನ
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣದ ಬಳಿಕ ಮೊಟ್ಟಮೊದಲು ಇಲ್ಲಿನ ರನ್ ವೇ ಮೇಲೆ ಲ್ಯಾಂಡ್ ಆಗಿದ್ದು ಇದೇ ವಿಶೇಷ ವಿಮಾನ. 2023ರ ಫೆಬ್ರವರಿ 21ರಂದು ವಾಯು ಸೇನೆಯ K 5012 ವಿಶೇಷ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಶಿವಮೊಗ್ಗದ ರನ್ ವೇ ಮೇಲೆ ವಿವಿಧ ಮಾದರಿಯ ಲ್ಯಾಂಡಿಂಗ್, ಟಚ್ ಅಂಡ್ ಗೋ ಮಾದರಿಯನ್ನು ಪರೀಕ್ಷಿಸಿ, ಇದು ವಿಮಾನ ಹಾರಾಟಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿತ್ತು.

ಮಲೆನಾಡಿನ ಜನರು ತಮ್ಮೂರಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಮೊದಲ ವಿಮಾನದ ವಿಡಿಯೋ ಕಣ್ತುಂಬಿಕೊಂಡು ಹೆಮ್ಮೆ ಪಟ್ಟಿದ್ದರು. ಇದಾದ ಬಳಿಕ ಇದೇ ವಿಶೇಷ ವಿಮಾನ K 5012 ವಿಮಾನ ನಿಲ್ದಾಣದ ಉದ್ಘಾಟನೆಗೆ 2023ರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದಿತ್ತು. ಕೆಳಗಿದೆ ವಿಡಿಯೋ:
