ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಚಿರತೆಯೊಂದು ತೋಟಕ್ಕೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ದಿದೆ. ಎಪಿಎಂಸಿ ಮಾಜಿ ನಿರ್ದೇಶಕಿ ಸುಜಾತಾ ಅವರಿಗೆ ಸೇರಿದ ಟಿವಿಎಸ್ ಫಾರಂನಲ್ಲಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಚಿರತೆಯು ನಾಯಿಯನ್ನು ಕಚ್ಚಿಕೊಂಡು ಹೋಗುವ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸುಜಾತ ಅವರು ತಮ್ಮ ತೋಟದಲ್ಲಿ ಒಂದು ದೊಡ್ಡ ಹೆಣ್ಣು ಕರಿ ನಾಯಿ, ನಾಲ್ಕು ಮರಿ ನಾಯಿಗಳು ಹಾಗೂ ನಾಲ್ಕು ಬೆಕ್ಕುಗಳನ್ನು ಸಾಕಿದ್ದರು. ಭಾನುವಾರ ರಾತ್ರಿ 8:30ರ ಸುಮಾರಿಗೆ ಇವುಗಳಿಗೆ ಅನ್ನ, ಹಾಲು ಹಾಕಿ ಅವರು ತೆರಳಿದ್ದರು. ಸೋಮವಾರ ಬೆಳಗ್ಗೆ ವಾಕಿಂಗ್ ಹೋಗುವಾಗ ಕೇವಲ ಎರಡು ಮರಿ ನಾಯಿಗಳು ಮಾತ್ರ ಇರುವುದು ಕಂಡುಬಂದಿದೆ.

ಸಿಸಿಟಿವಿಯಲ್ಲಿ ಕಾಣಿಸ್ತು ಚಿರತೆ
ಅನುಮಾನಗೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಧ್ಯರಾತ್ರಿ 2:03ರ ಸುಮಾರಿಗೆ ಚಿರತೆಯೊಂದು ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಇದೇ ತೋಟದಲ್ಲಿ ಕಳೆದ ಆರೇಳು ತಿಂಗಳ ಹಿಂದೆಯೂ ಸಹ ಚಿರತೆಯು ಸಾಕು ನಾಯಿಯೊಂದನ್ನು ಇದೇ ರೀತಿ ಕೊಂದು ಹಾಕಿತ್ತು. ಈ ಹಿಂದೆಯೇ ಅರಣ್ಯ ಇಲಾಖೆಗೆ ದೂರು ನೀಡಿ, ಇಲಾಖೆಯ ವತಿಯಿಂದ ಬೋನು ಇಡಲಾಗಿತ್ತು. ಆದರೆ ಚಿರತೆ ಸೆರೆಸಿಕ್ಕಿರಲಿಲ್ಲ.
