ಶಿವಮೊಗ್ಗ: ಜೈಲಿನಲ್ಲಿರುವ ವಿಚಾರಣಾಧೀನ ಖೈದಿ ತನ್ನ ಪತ್ನಿಗೆ ಬೆದರಿಕೆ ಹಾಕಲು ಕಳುಹಿಸಿದ್ದ ನಾಲ್ವರು ಬುರ್ಖಾಧಾರಿಗಳನ್ನು ಸಾರ್ವಜನಿಕರು ಹಿಡಿದು, ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗದ ಕೆ.ಆರ್.ಪುರಂನಲ್ಲಿ ಘಟನೆ ನಡೆದಿದೆ.
ಬುರ್ಖಾ ಧರಿಸಿ ಬಂದಿದ್ದ ಅಸ್ಲಾಮ್ (25), ಮಹೇಶ್ (20) ಮತ್ತು ದರ್ಶನ್ (20) ಬಂಧಿತರು. ಇವರೊಂದಿಗೆ ಬಂದಿದ್ದ ಮುನ್ನಾ (24) ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.

ಏನಿದು ಕೇಸ್?
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಪ್ರಕರಣದ ವಿಚರಣಾಧೀನ ಖೈದಿ ಕೆ.ಆರ್. ಪುರಂನಲ್ಲಿ ವಾಸವಾಗಿರುವ ತನ್ನ ಪತ್ನಿಗೆ ಬೆದರಿಕೆ ಹಾಕಲು ನಾಲ್ವರು ಯುವಕರನ್ನು ಕಳುಹಿಸಿದ್ದ. ಜೈಲಿನಲ್ಲಿರುವ ಆತನನ್ನು ನೋಡಲು ಪತ್ನಿ ಬರುತ್ತಿಲ್ಲ, ಖರ್ಚಿಗೆ ಹಣ ನೀಡುತ್ತಿಲ್ಲ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಆತ, ಜೈಲಿನಿಂದಲೇ ತನ್ನ ಪತ್ನಿಗೆ ಹೆದರಿಸುವಂತೆ ಸಹಚರರಿಗೆ ಸೂಚನೆ ನೀಡಿದ್ದ ಎಂದು ಆರೋಪಿಸಲಾಗಿದೆ.

ಬುರ್ಖಾ ಧರಿಸಿ ಬಂದಿದ್ದ ಕಿಡಿಗೇಡಿಗಳು
ವಿಚಾರಣಾಧೀನ ಖೈದಿಯ ಆದೇಶದಂತೆ ನಾಲ್ವರು ಯುವಕರು ಬುರ್ಖಾ ಧರಿಸಿ ಮಹಿಳೆಯ ಮನೆ ಬಳಿ ತೆರಳಿದ್ದರು. ಅವರ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ನಾಲ್ವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಜನ ಹಿಗ್ಗಾಮುಗ್ಗಾ ಥಳಿಸಿ, ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಓರ್ವ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.