ಶಿರಾಳಕೊಪ್ಪ: ಪಟ್ಟಣದ ಮನೆಯೊಂದರ ಹಿಂಬಾಗಿಲು ಮುರಿದು ಕಪಾಟಿನಲ್ಲಿದ್ದ ಸುಮಾರು ₹90,000 ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.
ಶಿರಾಳಕೊಪ್ಪದ ಮುಜಾಮಿಲ್ ಅಹಮ್ಮದ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮುಜಾಮಿಲ್ ಅವರ ಮಗಳ ಮದುವೆಯು ಉಡುಗಣಿಯ ಶಾದಿ ಮಹಲ್ನಲ್ಲಿ ಏರ್ಪಾಡಾಗಿತ್ತು. ಈ ಹಿನ್ನೆಲೆ ಅವರ ಸಂಬಂಧಿ ತಂದಿದ್ದ ₹60,000 ಮೌಲ್ಯದ 4 ಗ್ರಾಂ ತೂಕದ ಒಂದು ಜೊತೆ ಬಂಗಾರದ ಓಲೆ, ₹30,000 ಮೌಲ್ಯದ 2 ಗ್ರಾಂ ತೂಕದ ಬಂಗಾರದ ಕಿವಿಯ ಗುಂಡನ್ನು ಮುಜಾಮಿಲ್ ಅವರ ಪತ್ನಿ ಬೆಡ್ ರೂಂನ ಕಪಾಟಿನಲ್ಲಿಟ್ಟು ಬೀಗ ಹಾಕಿದ್ದರು.

ಕಾರ್ಯಕ್ರಮಕ್ಕೆ ಹೋದಾಗ ಕಳ್ಳತನ
ಕುಟುಂಬದವರೆಲ್ಲರು ಮನೆಗೆ ಬೀಗ ಹಾಕಿಕೊಂಡು ಉಡುಗಣಿಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಬಂದಾಗ ಮನೆಯಲ್ಲಿ ಕಳ್ಳತನ ಆಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಕಳ್ಳರು ಮನೆಯ ಹಿಂಬಾಗಿಲಿನ ಮೇಲಿದ್ದ ಗ್ರಿಲ್ ಜಾಗದಿಂದ ಒಳನುಗ್ಗಿ ಕಪಾಟಿನಲ್ಲಿದ್ದ 6 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

