ಶಿವಮೊಗ್ಗ: ಸಾರ್ವಜನಿಕರ ಹಿತದೃಷ್ಟಿಯಿಂದ ಜೂನ್ 18 ರಿಂದ ಜಾರಿಗೆ ಬರುವಂತೆ ರಾಜ್ಯ ಹೆದ್ದಾರಿ–52ರ ಹುಲಿಕಲ್ ಘಾಟ್ (ಬಾಳೆಬರೆ ಘಾಟ್) ಮೂಲಕ ನಿಗದಿತ ಸಾಮರ್ಥ್ಯದ ಸ್ಟೇಜ್ ಕ್ಯಾರಿಯೇಜ್ ಬಸ್ಸುಗಳು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಬಸ್ಸುಗಳಿಗೆ ಷರತ್ತು ಅನ್ವಯ
ಘಾಟ್ ವ್ಯಾಪ್ತಿಯ ಚಂಡಿಕಾಂಬ ದೇವಸ್ಥಾನದ ಬಳಿಯ ಹೇರ್ಪಿನ್ ತಿರುವಿನಲ್ಲಿ ಅಳವಡಿಸಿರುವ ವೇಗಮಿತಿ ಫಲಕದಂತೆ ಗಂಟೆಗೆ 20 ಕಿ.ಮೀ. ವೇಗದಲ್ಲಿ ಚಲಿಸಬೇಕು. ಚಕ್ರತಳ 496 ಸೆ.ಮೀ. ಮೀರದ, 40+2 ಆಸನ ಸಾಮರ್ಥ್ಯವುಳ್ಳ ಹಾಗೂ ಒಟ್ಟು ತೂಕ 9,000 ಕೆ.ಜಿ ಒಳಗಿರುವ ಸ್ಟೇಜ್ ಕ್ಯಾರಿಯೇಜ್ ಬಸ್ಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ.

ಕಳೆದ ಏಪ್ರಿಲ್ 9ರಂದು ಇಲ್ಲಿ ಭಾರಿ ಭೂಕುಸಿತ ಉಂಟಾಗಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಮಾಸ್ತಿಕಟ್ಟೆಯಿಂದ ಹೊಸಅಂಗಡಿವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗ ಕಲ್ಪಿಸಲಾಗಿತ್ತು. ಪ್ರಸ್ತುತ ಲೋಕೋಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ಹಾಕಿ ತಾತ್ಕಾಲಿಕ ದುರಸ್ತಿ ಕೈಗೊಂಡ ನಂತರ ಅಧಿಕಾರಿಗಳ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಘಾಟಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ತಡೆಗೋಡೆ, ಸೂಚನಾ ಫಲಕಗಳು ಹಾಗೂ ರಾತ್ರಿ ಸಂಚಾರದ ಅನುಕೂಲಕ್ಕಾಗಿ ಕ್ಯಾಟ್ ಐ ಮತ್ತು ಸೋಲಾರ್ ಸ್ಟಡ್ಸ್ ಅಳವಡಿಸಿ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
