ಶಿವಮೊಗ್ಗ: ಮನೆಯೊಂದರ ಬೀಗ ಒಡೆದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳ್ಳತನ ಮಾಡಲಾಗಿದೆ. ನಗರದ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಆಶ್ರಯ ಬಡಾವಣೆಯ ನಿವಾಸಿ, ಪತ್ರಿಕೆ ವಿತರಕ ರಾಮು ಜಿ. ಎಂಬುವರು ಜೂನ್ 12ರಂದು ಕುಟುಂಬ ಸಹಿತ ತಿರುಪತಿಗೆ ತೆರಳಿದ್ದರು. ಈ ವೇಳೆ ಮನೆಯ ರೂಮಿನ ಬೀರುವಿನಲ್ಲಿದ್ದ ಚಿನ್ನದ ಒಡವೆಗಳು ಹಾಗೂ ಮತ್ತೊಂದು ಕೋಣೆಯಲ್ಲಿದ್ದ ನಗದು ಸುರಕ್ಷಿತವಾಗಿಟ್ಟು ಬೀಗ ಹಾಕಿದ್ದರು. ಜೂನ್ 17ರಂದು ಮುಂಜಾನೆ ದೇವಸ್ಥಾನದಿಂದ ವಾಪಸ್ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳರು ಮುಂಬಾಗಿಲಿನ ಬೀಗ ಹಾಗೂ ಇಂಟರ್ಲಾಕ್ ಅನ್ನು ಆಯುಧದಿಂದ ಮೀಟಿ ಒಳನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಬೀರನಲ್ಲಿದ್ದ ಚಿನ್ನದ ಚೈನ್ಗಳು, ಉಂಗುರಗಳು, ಜುಮುಕಿ ಸೇರಿದಂತೆ ಒಟ್ಟು ₹6 ಲಕ್ಷ ಮೌಲ್ಯದ 60.7 ಗ್ರಾಂ ಚಿನ್ನಾಭರಣ, ₹4,000 ಮೌಲ್ಯದ ಮಗುವಿನ ಬೆಳ್ಳಿಯ ಕಾಲಬಳೆ-ಗೆಜ್ಜೆ ಹಾಗೂ ಕೋಣೆಯಲ್ಲಿದ್ದ ₹5,000 ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಒಟ್ಟು ₹6,09,000 ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ಆರೋಪಿಸಲಾಗಿದೆ. ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
