ಶಿವಮೊಗ್ಗ: ನಗರದ ಪ್ರಗತಿ ಹಾಗೂ ಸುಸ್ಥಿರ ಅಭಿವೃದ್ಧಿಯ ದೃಷ್ಟಿಯೊಂದಿಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಸಭಾಂಗಣದಲ್ಲಿ ಮಹತ್ವದ ಸಭೆ ನಡೆಯಿತು. ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದ ಸಭೆಯಲ್ಲಿ ಪ್ರಮುಖ ಸಂಗತಿಗಳ ಚರ್ಚೆ ನಡೆಯಿತು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ನಗರವನ್ನು ಹಸಿರುಮಯವಾಗಿಸುವ ಜೊತೆಗೆ ನಾಗರಿಕರ ಭದ್ರತೆ ಮತ್ತು ಆಧುನಿಕ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಿ, ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು?
ಶಿವಮೊಗ್ಗ ನಗರದ ಪ್ರತಿ ವಾರ್ಡ್ ಹಾಗೂ ಮುಕ್ತ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಶಿವಮೊಗ್ಗವನ್ನು ಮಾದರಿ ಹಸಿರು ನಗರವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಇದರ ಭಾಗವಾಗಿ ಸಾರ್ವಜನಿಕ ಪಾರ್ಕ್ಗಳಲ್ಲಿ ಕೇವಲ ಅಲಂಕಾರಿಕ ಗಿಡಗಳಲ್ಲದೆ, ಜೈವಿಕ ವೈವಿಧ್ಯತೆ ಹೆಚ್ಚಿಸುವ ಔಷಧೀಯ ಸಸ್ಯಗಳು ಹಾಗೂ ಹಣ್ಣಿನ ಗಿಡಗಳನ್ನು ನೆಡಲು ತೀರ್ಮಾನಿಸಲಾಯಿತು. ಪಾರ್ಕ್ಗಳಲ್ಲಿ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯದಂತೆ ತಡೆಗಟ್ಟಲು ಕಡ್ಡಾಯವಾಗಿ ಸುಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಯಿತು.
ಸುಗಮ ಸಂಚಾರ, ಸ್ಕೈ ವಾಕ್
ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣದ ವೃತ್ತದಲ್ಲಿ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಲಿಫ್ಟ್ ಸೌಲಭ್ಯವುಳ್ಳ ಸ್ಕೈ-ವಾಕ್ ನಿರ್ಮಿಸಲು ಕಾರ್ಯಸೂಚಿಯಲ್ಲಿ ಸೇರಿಸಿಕೊಳ್ಳಲಾಗಿದೆ.
ನಗರದ ಜೀವನಾಡಿಯಾಗಿರುವ ಕೆರೆಗಳ ಅನಧಿಕೃತ ಒತ್ತುವರಿಗಳನ್ನು ತಕ್ಷಣವೇ ಗುರುತಿಸಿ, ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಿಂಗ್ ರೋಡ್ಗಳ ಮಧ್ಯಭಾಗದಲ್ಲಿ ಪರಿಸರ ಸ್ನೇಹಿ ಗ್ರೀನ್ ಬುಷ್ ಮಾದರಿಯ ಹಸಿರು ಪಟ್ಟಿ ನಿರ್ಮಿಸಿ ಸುಂದರೀಕರಣಗೊಳಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ್ ಸರ್ಜಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಉದ್ಯಮಿಗಳಾದ ಎಸ್.ರುದ್ರೇಗೌಡ, ವಸಂತ ಹೋಬಳಿದಾರ್, ಗೋಪಿನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
