ಶಿವಮೊಗ್ಗ: ವರದಕ್ಷಿಣೆ ಹಾಗೂ ಸೈಟ್ಗಾಗಿ ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದ ಆರೋಪಿಗೆ ಇಲ್ಲಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯವು ಮೂರು ವರ್ಷ ಸಾದಾ ಸಜೆ ಹಾಗೂ ಒಟ್ಟು ₹15,000 ದಂಡ ವಿಧಿಸಿ ತೀರ್ಪು ನೀಡಿದೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು ನಿವಾಸಿ ಮಂಜುನಾಥ್ ಶಿಕ್ಷೆಗೆ ಒಳಗಾದ ಅಪರಾಧಿ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ವರದಕ್ಷಿಣೆ, ಸೈಟು, ಬಂಗಾರ
ಮಂಜುನಾಥ್ ತನ್ನ ಪತ್ನಿ ಸುಮಾ ಅವರಿಗೆ ಹೆಚ್ಚಿನ ವರದಕ್ಷಿಣೆ, ಸೈಟ್ ಹಾಗೂ ಬಂಗಾರ ತರುವಂತೆ ಪೀಡಿಸಿ ಕಿರುಕುಳ ನೀಡಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿದ್ದ. ಈ ಸಂಬಂಧ 2017ರಲ್ಲಿ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಪ್ರಭಾವತಿ.ಸಿ ಅವರು ತನಿಖೆ ನಡೆಸಿ 2018ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷ್ಯ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸಿದ್ಧರಾಜು ಎನ್.ಕೆ. ಅವರು, ಆರೋಪಿ ಮಂಜುನಾಥನಿಗೆ ಐಪಿಸಿ ಕಲಂ 498(ಎ) ಅಡಿ ಮೂರು ವರ್ಷ ಸಾದಾ ಸಜೆ, ₹10,000 ದಂಡ ಹಾಗೂ ಕಲಂ 506ರ ಅಡಿ 2 ವರ್ಷ ಸಾದಾ ಸಜೆ ಮತ್ತು ₹5,000 ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ. ಕಿರಣ್ಕುಮಾರ್ ವಾದ ಮಂಡಿಸಿದ್ದರು.