ಶಿವಮೊಗ್ಗ: ಕಳೆದ ವಾರವಷ್ಟೇ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದ ಘಟನೆ ಮಾಸುವ ಮುನ್ನವೇ, ಇದೀಗ ಎರಡನೇ ಬಾರಿಗೆ ಮತ್ತೆ ಇ-ಮೇಲ್ ಮೂಲಕ ಸ್ಫೋಟದ ಬೆದರಿಕೆ ಸಂದೇಶ ಬಂದಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ದಿನಾಂಕ ಜೂನ್ 27ರಂದು ರಾತ್ರಿ ಹಾಗೂ ಜೂ.29ರ ಮುಂಜಾನೆ ಅನ್ಬನಂತನ್ ಅರಿಯಪ್ಪನ್ ಎಂಬ ಇ-ಮೇಲ್ ಐಡಿಯಿಂದ ಎರಡು ಪ್ರತ್ಯೇಕ ಬೆದರಿಕೆ ಸಂದೇಶಗಳು ಬಂದಿವೆ. ಶಿವಮೊಗ್ಗ ನ್ಯಾಯಾಲಯದ ಆವರಣ ಸೇರಿದಂತೆ ಬೆಂಗಳೂರು, ಗದಗ ಹಾಗೂ ಚೆನ್ನೈನ ಪ್ರಮುಖ ಕಚೇರಿಗಳಲ್ಲಿ ರಾಸಾಯನಿಕ ಮತ್ತು ಐಇಡಿ ಬಾಂಬ್ಗಳನ್ನು ಸ್ಫೋಟಿಸುವುದಾಗಿ ಮೇಲ್ನಲ್ಲಿ ಎಚ್ಚರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ದ್ವೇಷ ಹಾಗೂ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಈ ಬೆದರಿಕೆ ಒಡ್ಡಲಾಗಿದ್ದು, ಸೋಮವಾರ ಮಧ್ಯಾಹ್ನದೊಳಗೆ ಸ್ಫೋಟ ನಡೆಸುವುದಾಗಿ ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಶ್ರೀಲಕ್ಷ್ಮೀ ಜಿ.ಎಂ. ಅವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ.
ನ್ಯಾಯಾಲಯದಲ್ಲಿ ಶೋಧ ಕಾರ್ಯ
ಕಳೆದ ವಾರ ಸ್ಪೋಟದ ಬೆದರಿಕೆ ಹಿನ್ನೆಲೆ ಶಿವಮೊಗ್ಗ ನ್ಯಾಯಾಲಯದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಅಲ್ಲದೆ ಭದ್ರತೆ ಒದಗಿಸಲಾಗಿತ್ತು. ಬಾಂಬ್ ಬೆದರಿಕೆ ಹಿನ್ನೆಲೆ ಪುನಃ ಬಾಂಬ್ ಪತ್ತೆ ದಳ ಮತ್ತು ಶ್ವಾನದಳ ಪುನಃ ಶೋಧ ಕಾರ್ಯ ನಡೆಸಿದವು. ನ್ಯಾಯಾಲಯದ ಆವರಣದಲ್ಲೆಲ್ಲ ಶೋಧ ಕಾರ್ಯ ನಡೆಸಲಾಯಿತು.
