ಹೊಸನಗರ: ಸ್ಥಳೀಯ ರೈತರು, ವರ್ತಕರು ಹಾಗೂ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಪಟ್ಟಣದ ಕಳೂರು ರಾಮೇಶ್ವರ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜುಲೈ 3ರಿಂದ 5ರ ವರೆಗೆ ಮೂರು ದಿನಗಳ ‘ಹಲಸು ಮತ್ತು ಆಹಾರ ಮೇಳ’ ಆಯೋಜಿಸಲಾಗಿದೆ ಎಂದು ಆಯೋಜಕ ಪ್ರಭಾಕರ ಮಂದಾರ್ತಿ ತಿಳಿಸಿದರು. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜರತ್ನ ಇವೆಂಟ್ಸ್ ಮತ್ತು ಜನ ಸ್ನೇಹಿ ಇವೆಂಟ್ಸ್ ಸಂಸ್ಥೆಗಳ ಸಹಯೋಗದಲ್ಲಿ ಈ ಮೇಳ ನಡೆಯಲಿದ್ದು, ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ವೇಳೆ ಕೃಷಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು ಎಂದರು.

ಖರೀದಿದಾರರು ಹಾಗೂ ಬೆಳೆಗಾರರ ನಡುವೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ. ಮೇಳದಲ್ಲಿ ಹಲಸಿನ ಹಣ್ಣಿನ ವಿವಿಧ ಬಗೆಯ ನೂತನ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಅಪರೂಪದ ತಳಿಯ ಹಲಸಿನ ಹಣ್ಣುಗಳು ಲಭ್ಯವಿರಲಿವೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಳೂರು ರಾಮೇಶ್ವರ ಸಂಘದ ಅಧ್ಯಕ್ಷ ದುಮ್ಮ ವಿನಯ್ ಕುಮಾರ್, ಪ್ರಮುಖರಾದ ರಮಾಕಾಂತ್, ವಾಟಗೋಡು ಸುರೇಶ್, ವಿನಾಯಕ ಚಕ್ಕರ್, ಪೂರ್ಣೇಶ್, ಸಂದೀಪ್ ಇದ್ದರು.
