ಮಂಗಳಾರತಿ ತೆಗೆದುಕೊಳ್ಳುವಾಗ ಮಹಿಳೆಗೆ ತನ್ನ ಕೊರಳಲ್ಲಿ ಮಾಂಗಲ್ಯ ಸರವಿಲ್ಲ ಅನ್ನುವುದು ಗೊತ್ತಾಗಿದೆ. ಹೇಗಾಯ್ತು ಕಳ್ಳತನ?
ಶಿವಮೊಗ್ಗ: ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ₹2 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದೆ. ನಗರದ ನವುಲೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮಂಗಳಾರತಿ ತೆಗೆದುಕೊಳ್ಳುವಾಗ ಇದು ಮಹಿಳೆಯ ಅರಿವಿಗೆ ಬಂದಿದೆ.

ಇಂದಿರಾ ಬಡಾವಣೆಯ ನಿವಾಸಿ ರೇಣುಕಮ್ಮ (57) ಎಂಬುವವರು ಚಿನ್ನದ ಸರ ಕಳೆದುಕೊಂಡವರು. ಜೂನ್ 27ರಂದು ಸಂಜೆ ಪತಿ ಪುರುಷೋತ್ತಮ ಅವರೊಂದಿಗೆ ಬಸ್ಸಿನಲ್ಲಿ ನವುಲೆ ದೇವಸ್ಥಾನಕ್ಕೆ ಪೂಜೆಗಾಗಿ ತೆರಳಿದ್ದರು. ರಾತ್ರಿ ದೇವಸ್ಥಾನದಲ್ಲಿ ಮಂಗಳಾರತಿ ತೆಗೆದುಕೊಳ್ಳುವಾಗ ಅವರ ಕುತ್ತಿಗೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅವರು ದೇವಸ್ಥಾನದ ಸುತ್ತಮುತ್ತ ಹಾಗೂ ಬಂದು ಹೋದ ದಾರಿಯಲ್ಲಿ ಹುಡುಕಾಟ ನಡೆಸಿದರೂ ಸರ ಪತ್ತೆಯಾಗಿಲ್ಲ.
ಘಟನೆಯಿಂದ ಆಘಾತಕ್ಕೊಳಗಾಗಿ ರೇಣುಕಮ್ಮ ಅವರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ತಡವಾಗಿ ದೂರು ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.