NEWS HIGHLIGHTS
ಹೊಸನಗರ: ಪ್ರವಾಸಿ ತಾಣ ಕೊಡಚಾದ್ರಿ ಸಮೀಪ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬೆಂಗಳೂರಿನ ಶ್ರೀಕಾಂತ್ (28) ಮೃತ ದುರ್ದೈವಿ. ಸ್ನೇಹಿತರೊಂದಿಗೆ ಕೊಡಚಾದ್ರಿ ವೀಕ್ಷಣೆಗಾಗಿ ಶುಕ್ರವಾರ ಆಗಮಿಸಿದ್ದ ಶ್ರೀಕಾಂತ್, ಸಂಪೇಕಟ್ಟೆ ಸಮೀಪದ ಕಟ್ಟಿನಹೊಳೆಯಲ್ಲಿರುವ ಸ್ನೇಹಿತರ ಮನೆಯಲ್ಲಿ ತಂಗಿದ್ದರು. ಶನಿವಾರ ಬೆಳಿಗ್ಗೆ ಕೊಡಚಾದ್ರಿ ಶಿಖರ ವೀಕ್ಷಣೆಗೆ ತೆರಳಲು ಯೋಜನೆ ರೂಪಿಸಿದ್ದರು. ಆದರೆ ಶುಕ್ರವಾರ ರಾತ್ರಿ ತಾವು ತಂಗಿದ್ದ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.

ತಕ್ಷಣ ಸ್ನೇಹಿತರು ಅವರನ್ನು ಹೊಸನಗರ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಶ್ರೀಕಾಂತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಹೊಸನಗರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಕುಟುಂಬದವರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.