ಶಿವಮೊಗ್ಗ: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ (78) ಅವರು ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಸಂಜೆ 6:15ಕ್ಕೆ ನಿಧನರಾಗಿದ್ದಾರೆ. ಇಂದು ರಾತ್ರಿ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗಕ್ಕೆ ತರಲಾಗುತ್ತಿದ್ದು, ಜುಲೈ 27ರ ಸಂಜೆ 4 ಗಂಟೆಗೆ ಹೊಸಳ್ಳಿಯ ಅವರ ತೋಟದಲ್ಲಿ ವೀರಶೈವ ಲಿಂಗಾಯತ ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಲಿದೆ.
ಶಿವಮೊಗ್ಗದಲ್ಲಿ ಹೆಚ್.ಎಂ.ಚಂದ್ರಶೇಖರಪ್ಪ ಅವರ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಜುಲೈ 27ರಂದು ಬೆಳಗ್ಗೆ 9:30ಕ್ಕೆ ಬಸವನಗುಡಿ ಮುಖ್ಯರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಕಾಂಗ್ರೆಸ್ ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ಮನೆ ಬಳಿ ನೀರವ ಮೌನ
ಬಸವನಗುಡಿಯಲ್ಲಿರುವ ಹೆಚ್.ಎಂ.ಚಂದ್ರಶೇಖರಪ್ಪ ಅವರ ನಿವಾಸದ ಬಳಿ ಮೌನ ಆವರಿಸಿದೆ. ಕುಟುಂಬದವರು ಈಗಾಗಲೇ ಬೆಂಗಳೂರಿನಲ್ಲಿ ಇದ್ದಾರೆ. ನಿಧನದ ವಿಷಯ ತಿಳಿಯುತ್ತಿದ್ದಂತೆ ಹೆಚ್.ಎಂ. ಚಂದ್ರಶೇಖರಪ್ಪ ಅವರ ಸಂಬಂಧಿಗಳು, ಸ್ನೇಹಿತರು, ಬೆಂಬಲಿಗರು ಮನೆ ಬಳಿ ಆಗಮಿಸಿದ್ದಾರೆ.