ನವದೆಹಲಿ: ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ (ಎನ್ಪಿಡಿಡಿ) ಅಡಿಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಸೇರಿದಂತೆ ರಾಜ್ಯದಾದ್ಯಂತ ಶೀತಲೀಕರಣ ಘಟಕ ಹಾಗೂ ಗುಣಮಟ್ಟ ಪರಿಶೀಲನಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಬಿ.ವೈ.ರಾಘವೇಂದ್ರ ಪ್ರಸ್ತಾಪಿಸಿದ ವಿಷಯಕ್ಕೆ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಕ್ಷೀರಪಾಲನಾ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಉತ್ತರ ನೀಡಿದ್ದು, ಆ ಮಾಹಿತಿಯನ್ನು ಸಂಸದರ ಕಾರ್ಯಾಲಯ ಬಿಡುಗಡೆ ಮಾಡಿದೆ.

ಶಿಮುಲ್ಗೆ ಬೃಹತ್ ಕೊಡುಗೆ
ಶಿವಮೊಗ್ಗ ಹಾಲು ಒಕ್ಕೂಟದ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ) ಹೈನುಗಾರಿಕಾ ಜಾಲಕ್ಕೆ ಕೇಂದ್ರದಿಂದ ಆರ್ಥಿಕ ನೆರವು ದೊರಕಿದೆ ಎಂದು ಸಂಸದ ರಾಘವೇಂದ್ರ ಅವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಈ ಯೋಜನೆಯಿಂದ ಶಿಮುಲ್ ಒಕ್ಕೂಟದ ವ್ಯಾಪ್ತಿಯಲ್ಲಿ, ಶಿವಮೊಗ್ಗ ಜಿಲ್ಲೆಯ 11,760 ರೈತ ಕುಟುಂಬಗಳು ಸೇರಿದಂತೆ, ಒಟ್ಟು 37,750 ರೈತರು ನೇರ ಪ್ರಯೋಜನ ಪಡೆದಿದ್ದಾರೆ.
- ಶಿವಮೊಗ್ಗದ 174 ಸಂಘಗಳು ಸೇರಿ, ಒಟ್ಟು ಶಿಮುಲ್ ಒಕ್ಕೂಟದ 479 ಡೈರಿ ಸಹಕಾರ ಸಂಘಗಳಿಗೆ ಆಧುನಿಕ ಹಾಲು ಪರೀಕ್ಷಾ ಸಾಧನಗಳಾದ ಸ್ವಯಂಚಾಲಿತ ಹಾಲು ಸಂಗ್ರಹಣಾ ಘಟಕ ಹಾಗೂ ಎಲೆಕ್ಟ್ರಾನಿಕ್ ಹಾಲಿನ ಕಲಬೆರಕೆ ಪರೀಕ್ಷಾ ಯಂತ್ರಗಳ ಸೌಲಭ್ಯಗಳೊಂದಿಗೆ ಬಲಪಡಿಸಲಾಗಿದೆ.
- ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿದಿನ 5.27 ಲಕ್ಷ ಲೀಟರ್ ಹೆಚ್ಚುವರಿ ಹಾಲು ಸಂಗ್ರಹಣೆ ಮಾಡಲಾಗುತ್ತಿದೆ. ಒಟ್ಟು 177 ಬಲ್ಕ್ ಮಿಲ್ಕ್ ಕೂಲರ್ಗಳನ್ನು ಅಳವಡಿಸಲಾಗಿದೆ.
ಕರ್ನಾಟಕಕ್ಕೆ ₹455.21 ಕೋಟಿ
ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಎನ್ಪಿಡಿಡಿ ಯೋಜನೆಯ ಘಟಕ-ಎ ಅಡಿ ಒಟ್ಟು ₹455.21 ಕೋಟಿ ವೆಚ್ಚದ 22 ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ₹307.83 ಕೋಟಿಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಈ ಪೈಕಿ ಈಗಾಗಲೇ ₹255.80 ಕೋಟಿ ಅನುದಾನವನ್ನು ಕೇಂದ್ರದಿಂದ ಬಿಡುಗಡೆ ಮಾಡಲಾಗಿದ್ದು, ಇದರಡಿ ರಾಜ್ಯದಾದ್ಯಂತ 5.64 ಲಕ್ಷಕ್ಕೂ ಹೆಚ್ಚು ರೈತರು ಸಹಕಾರಿ ಜಾಲಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಲಾಗಿದೆ.