ಶಿವಮೊಗ್ಗ: ನಗರದ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರವನ್ನು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಉದ್ಘಾಟಿಸಿದರು.➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.
ಸುದರ್ಶನ್ ಚನ್ನಂಗಿಹಳ್ಳಿ ಭಾಷಣದ ಪ್ರಮುಖಾಂಶ
ಸೋಷಿಯಲ್ ಮೀಡಿಯಾ ಬಂದ ಮೇಲೆ ಪ್ರತಿಯೊಬ್ಬರೂ ಪತ್ರಕರ್ತರಾಗಿದ್ದಾರೆ. ಆದರೆ ಅವರೆಲ್ಲರೂ ಜವಾಬ್ದಾರಿಯುತ ಪತ್ರಕರ್ತರಲ್ಲ. ವರದಿಗಳು ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಅರಿತು ವರದಿ ಮಾಡುವವರೇ ನಿಜವಾದ ಪತ್ರಕರ್ತರು. ಇನ್ನು, ಪ್ರತಿ ವ್ಯಕ್ತಿಯನ್ನು ನಿಯಂತ್ರಿಸುವ ಮಟ್ಟಕ್ಕೆ ಸಾಮಾಜಿಕ ಜಾಲತಾಣಗಳು ತಲುಪಿರುವುದು ಕಳವಳಕಾರಿ ಸಂಗತಿಯಾಗಿದೆ.

ಪ್ರಪಂಚದ ಮೂಲೆಯಲ್ಲಿ ಏನೇ ಘಟನೆ ನಡೆದರೂ ಅದನ್ನು ಅಂಗೈನಲ್ಲಿ ನೋಡುವ ಅವಕಾಶವನ್ನು ಡಿಜಿಟಲ್ ಮಾಧ್ಯಮ ಒದಗಿಸಿಕೊಟ್ಟಿದೆ. ಇದರ ನಡುವೆಯೂ ಮುದ್ರಣ ಮಾಧ್ಯಮಗಳು ಹಾಗೂ ಪತ್ರಿಕೆಗಳು ಇಂದಿಗೂ ತಮ್ಮ ವಿಶ್ವಾಸವನ್ನು ಉಳಿಸಿಕೊಂಡಿದ್ದು, ಪತ್ರಕರ್ತರ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಜನಸಾಮಾನ್ಯರ ಧ್ವನಿಯಾಗಿ ನಾವು ಕೆಲಸ ಮಾಡಬೇಕಿದೆ.
ಯುವ ಪತ್ರಕರ್ತರಲ್ಲಿ ಕಲಿಕಾ ಮಟ್ಟ ಕುಸಿದಿದೆ. ಪ್ರಜ್ಞಾವಂತ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಓದುವ ಹಾಗೂ ಕಲಿಯುವ ಆಸಕ್ತಿ ಯುವ ಪತ್ರಕರ್ತರಲ್ಲಿ ಕುಂದಿದ್ದು, ಕಾಲಕ್ಕೆ ತಕ್ಕಂತೆ ಪತ್ರಕರ್ತರು ತಮ್ಮನ್ನು ತಾವು ಬದಲಾವಣೆ ಮಾಡಿಕೊಳ್ಳಬೇಕು.
AI ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಹಲವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಹೊಸತನಕ್ಕೆ ತೆರೆದುಕೊಂಡರೆ ಎಲ್ಲರಿಗೂ ಅವಕಾಶಗಳು ಇದ್ದೇ ಇರುತ್ತವೆ. ಪ್ರತಿಯೊಬ್ಬರೂ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕು.
ರಾಜ್ಯದಲ್ಲೇ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅತ್ಯಂತ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವದ ಜೀವಾಳವಾಗಿ ಪತ್ರಿಕಾರಂಗ ಕೆಲಸ ಮಾಡುತ್ತಿದೆ. ಆದರೆ ಸೋಷಿಯಲ್ ಮೀಡಿಯಾವನ್ನು ನಿಯಂತ್ರಿಸುವ ಹಾಗೂ ವಸ್ತುನಿಷ್ಠ ವರದಿಗಳನ್ನು ನೀಡುವ ತುರ್ತು ಅವಶ್ಯಕತೆಯಿದೆ.
– ಸಿ.ಎಸ್.ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ
ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಅಗಾಧ ಬದಲಾವಣೆಗಳಾಗಿವೆ. ವಸ್ತುನಿಷ್ಠ ಸುದ್ದಿಗಳನ್ನು ನೀಡುವ ಮೂಲಕ ಪತ್ರಿಕೆಗಳು ಮಾಧ್ಯಮ ಕ್ಷೇತ್ರದ ಘನತೆಯನ್ನು ಎತ್ತಿಹಿಡಿದಿವೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಸಜ್ಜನ ಮತ್ತು ಪ್ರತಿಭಾವಂತ ಪತ್ರಕರ್ತರಿದ್ದಾರೆ. ಟ್ರಸ್ಟ್ ಎಂದರೆ ನಂಬಿಕೆ ಎಂಬ ಹೆಗ್ಗಳಿಕೆಯನ್ನು ಮುಂದೆಯೂ ಉಳಿಸಿಕೊಂಡು ಹೋಗಲಾಗುತ್ತದೆ.
– ಎನ್.ಮಂಜುನಾಥ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ
ಇದೇ ವೇಳೆ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ವಾರ್ತಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್.ತಿಮ್ಮೋಳಿ, ತುಂಗಾತರಂಗ ಪತ್ರಿಕೆ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ, ದಿ ಹಿಂದೂ ಪತ್ರಿಕೆ ಛಾಯಾಗ್ರಹಕ ಎಸ್.ಕೆ.ದಿನೇಶ್, ಹೊಸದಿಗಂತ ಮುದ್ರಣ ವಿಭಾಗದ ರಾಘವೇಂದ್ರ, ವಿಜಯ ಕರ್ನಾಟಕದ ಟಿ.ಸಿ.ಮಂಜುನಾಥ್, ಸುವರ್ಣ ನ್ಯೂಸ್ ಹಿರಿಯ ವರದಿಗಾರ ರಾಜೇಶ್ ಕಾಮತ್, ನ್ಯೂಸ್ ಫಸ್ಟ್ ವಿಡಿಯೋ ಜರ್ನಲಿಸ್ಟ್ ಕೆ.ಎ.ಮಹೇಶ್, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮ್ಯಾನೇಜರ್ ಡಿ.ಕೆ.ಕಾರ್ತಿಕ್, ಶಿವಮೊಗ್ಗ ಟೈಮ್ಸ್ ಡಿಸೈನರ್ ಎಸ್.ಪಿ.ಶೋಭಾ ಹಾಗೂ ಪತ್ರಿಕಾ ವಿತರಕ ಡಿ.ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಉತ್ತಮ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.