ತೀರ್ಥಹಳ್ಳಿ: ಮಣ್ಣು ಜರಿದು ಬೃಹತ್ ತಡೆಗೋಡೆ ಮನೆಯ ಮೇಲೆ ಬಿದ್ದ ಪರಿಣಾಮ, ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಇಂದಿರಾನಗರದಲ್ಲಿ ತಡರಾತ್ರಿ ಸಂಭವಿಸಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಮಲ್ಲಿಕಾರ್ಜುನ (35), ನಾಗವೇಣಿ (28) ಹಾಗೂ ಸಂತೋಷ (3) ಮೃತ ದುರ್ದೈವಿಗಳು. ಮೃತದೇಹಗಳನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಮಣ್ಣಿನ ಅಡಿ ಸಿಲುಕಿದ್ದ ಇತರ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಗಾಯಾಳುವನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆ ವಿವರ
ರಾತ್ರಿ ಸುಮಾರು 2.30ರ ಹೊತ್ತಿಗೆ ಏಕಾಏಕಿ ಮಣ್ಣು ಜರಿದು, ತಡೆಗೋಡೆ ಮನೆಗಳ ಮೇಲೆ ಕುಸಿದಿದೆ. ಇದರಡಿ ಸಿಲುಕಿ ಮನೆಯಲ್ಲಿದ್ದವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸಿ ಉಳಿದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
60 ಅಡಿ ಉದ್ದದ ತಡೆಗೋಡೆ ಧರೆಗೆ
ಗಾಂಧಿನಗರ ವಾರ್ಡ್ ವ್ಯಾಪ್ತಿಗೆ ಬರುವ ಇಂದಿರಾನಗರವು ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಿದ್ದಾರೆ. ವಿವಿಧ ಜಿಲ್ಲೆಗಳಿಂದ ವಲಸೆ ಬಂದಿದ್ದ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಈ ಬಡಾವಣೆಯಲ್ಲಿ ವಾಸವಾಗಿವೆ. ಗೋಡೆ ಕುಸಿದ ಸ್ಥಳದ ಸುತ್ತಮುತ್ತ ಹೊಸಪೇಟೆಯ 15 ಹಾಗೂ ದಾವಣಗೆರೆಯ 5 ಮಂದಿ ವಾಸವಿದ್ದರು. ಇವರೆಲ್ಲರೂ ಬಂಡೆ ಲೋಡರ್ಸ್ ಕೆಲಸಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಗುಡ್ಡ ಕುಸಿತ ತಡೆಯುವ ಮುನ್ನೆಚ್ಚರಿಕೆಯಾಗಿ ಇಲ್ಲಿ ಸುಮಾರು 60 ಅಡಿ ಉದ್ದದ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ನಿರಂತರ ಮಳೆಯಿಂದ ತಡೆಗೋಡೆ ಧರೆಗೆಗುರುಳಿ ಈ ದುರಂತ ಸಂಭವಿಸಿದೆ. ಘಟನೆ ಸಂಭವಿಸಿದ ತಕ್ಷಣವೇ ಎಚ್ಚೆತ್ತ ಆಡಳಿತ ಯಂತ್ರವು ಒಟ್ಟು 17 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ ಎಂದು ತಿಳಿದು ಬಂದಿದೆ.