ಶಿವಮೊಗ್ಗ: ಸಂಪುಟ ವಿಸ್ತರಣೆಯ ಕುತೂಹಲಗಳಿಗೆ ಕೊನೆಗೂ ತೆರೆಬಿದ್ದಿದ್ದು, ಶಿವಮೊಗ್ಗ ಜಿಲ್ಲೆ ಹಾಗೂ ಈಡಿಗ ಸಮುದಾಯದ ಕೋಟಾದಡಿ ಮಧು ಬಂಗಾರಪ್ಪ ಅವರಿಗೆ ಪುನಃ ಸಚಿವ ಸ್ಥಾನ ಲಭಿಸಿದೆ.➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.
ಹೈಕಮಾಂಡ್ ಕಳುಹಿಸಿರುವ ನೂತನ ಸಚಿವರ ಪಟ್ಟಿಯಲ್ಲಿ ಮಧು ಬಂಗಾರಪ್ಪ ಅವರ ಹೆಸರಿರುವುದು ಖಚಿತವಾಗುತ್ತಿದ್ದಂತೆ, ಶಿವಮೊಗ್ಗದಲ್ಲಿ ಅವರ ಬೆಂಬಲಿಗರು ಸಂಭ್ರಮಿಸಿದರು.

ಇಲ್ಲಿದೆ 5 ಪ್ರಮುಖ ಕಾರಣ
ಕಾರಣ 1: ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಮಧು ಬಂಗಾರಪ್ಪ ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೆಲವು ಪ್ರಮುಖ ಯೋಜನೆಗಳಿಗೆ ಚಾಲನೆ ದೊರೆಯುವ ಹೊತ್ತಿಗೆ ಮುಖ್ಯಮಂತ್ರಿ ರಾಜೀನಾಮೆಯಿಂದ ಸಂಪುಟ ವಿಸರ್ಜನೆಯಾಗಿತ್ತು. ಹಿಂದಿನ ಅವಧಿಯ ಕಾರ್ಯವೈಖರಿಯ ರಿಪೋರ್ಟ್ ಕಾರ್ಡ್ ಅನ್ನು ಹೈಕಮಾಂಡ್ ಪರಿಗಣಿಸಿದೆ.
ಕಾರಣ 2: ಹೈಕಮಾಂಡ್ ವಲಯದಲ್ಲಿ ಮಧು ಬಂಗಾರಪ್ಪ ಅವರಿಗೆ ಉತ್ತಮ ನೆಟ್ವರ್ಕ್ ಇದೆ. ಈ ನೆಟ್ವರ್ಕ್ ಕೂಡ ಮಧು ಬಂಗಾರಪ್ಪ ಅವರಿಗೆ ಪ್ಲಸ್ ಆಯಿಂಟ್ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾರಣ 3: ಹೈಕಮಾಂಡ್ಗೆ ರವಾನೆಯಾಗಿದ್ದ ಎಲ್ಲ ಪಟ್ಟಿಗಳಲ್ಲು ಮಧು ಬಂಗಾರಪ್ಪ ಅವರ ಹೆಸರಿತ್ತು ಎಂದು ಹೇಳಲಾಗುತ್ತಿದೆ. ಹಾಗಾಗಿ ನಿರ್ಧಾರ ಕೈಗೊಳ್ಳುವಾಗ ಹೈಕಮಾಂಡ್ಗೆ ಯಾವುದೇ ಗೊಂದಲವಿಲ್ಲದೆ ಹೆಸರು ಪ್ರಕಟಿಸಿದೆ.
ಕಾರಣ 4: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಎಂಬುದು ಮಧು ಬಂಗಾರಪ್ಪ ಅವರಿಗೆ ಇರುವ ಪ್ಲಸ್ ಪಾಯಿಂಟ್. ಬಂಗಾರಪ್ಪ ಅವರು ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದರು. ಮಧು ಬಂಗಾರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದರಿಂದ ಹಿಂದುಳಿದ ವರ್ಗಗಳು ಒಗ್ಗೂಡಿಸಲು ಅನುಕೂಲ ಆಗಲಿದೆ.
ಕಾರಣ 5: ಬಂಗಾರಪ್ಪ ಅವರು ಮುಖ್ಯಮಂತ್ರಿ ಆದಾಗ ಡಿ.ಕೆ.ಶಿವಕುಮಾರ್ ಅವರನ್ನು ಮೊದಲ ಬಾರಿ ಸಚಿವರನ್ನಾಗಿ ಮಾಡಿದ್ದರು. ಈಗ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮಧು ಬಂಗಾರಪ್ಪ ಅವರಿಗೆ ಸ್ಥಾನ ನೀಡಿ ತಮ್ಮ ರಾಜಕೀಯ ಗುರುವಿನ ಋಣ ಸಂದಾಯ ಮಾಡಿದಂತಾಗಿದೆ.
ಬೇಳೂರು ಗೋಪಾಲಕೃಷ್ಣಗೆ ನಿರಾಸೆ
ಇನ್ನು, ಶಿವಮೊಗ್ಗ ಜಿಲ್ಲೆಯ ಕೋಟಾದಲ್ಲಿ ನಾಲ್ಕು ಮಂದಿಗೆ ಸಚಿವರಾಗುವ ಅವಕಾಶ ಇತ್ತು. ಶಾಸಕರಾದ ಬಿ.ಕೆ.ಸಂಗಮೇಶ್ವರ, ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಅವರು ಸಚಿವರಾಗಲು ಅರ್ಹರಾಗಿದ್ದರು. ಈ ಪೈಕಿ ಬೇಳೂರು ಗೋಪಾಲಕೃಷ್ಣ ಮತ್ತು ಮಧು ಬಂಗಾರಪ್ಪ ಅವರ ಮಧ್ಯೆ ತೀವ್ರ ಪೈಪೋಟಿ ಇತ್ತು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ ನಡೆಸಿ, ಲಾಬಿ ಮಾಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆ ತಮ್ಮ ಇಚ್ಛೆಯನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಗೋಪಾಲಕೃಷ್ಣ ಅವರ ಪ್ರಯತ್ನವನ್ನು ಗಮನಿಸಿದ್ದ ಅವರ ಬೆಂಬಲಿಗರು ಈ ಬಾರಿ ಸಚಿವ ಸ್ಥಾನ ಪಕ್ಕಾ ಎಂದೇ ಭಾವಿಸಿದ್ದರು. ಆದರೆ ಈಗ ಬೇಳೂರು ಗೋಪಾಲಕೃಷ್ಣ ಮತ್ತು ಅವರ ಬೆಂಬಲಿಗರಿಗೆ ನಿರಾಸೆಯಾಗಿದೆ.
ಕೈಗೂಡಲಿಲ್ಲ ಭದ್ರಾವತಿ ಜನರ ನಿರೀಕ್ಷೆ
ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಭದ್ರಾವತಿಗೆ ಭೇಟಿ ನೀಡಿದ್ದಾಗ ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಸರ್ಕಾರ ರಚನೆಯಾಗಿ ಸಿದ್ದರಾಮಯ್ಯ ಸಿಎಂ ಆದರು. ಆದರೆ ಸಂಗಮೇಶ್ವರ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಮಾತ್ರ ಲಭಿಸಿತ್ತು. ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಈಗ ಲೆಕ್ಕಾಚಾರ ಬದಲಾಗಿದೆ.
ಇಂದು ಸಂಜೆ ಮಧು ಬಂಗಾರಪ್ಪ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಿಕ್ಷಣ ಇಲಾಖೆ ಖಾತೆಯೆ ದೊರೆಯಬಹುದು ಎಂದು ಚರ್ಚೆ ನಡೆಯುತ್ತಿದೆ.