ಶಿವಮೊಗ್ಗ: ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ಸಭೆ ಹಾಗೂ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗ ಡಿಸಿ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್

ಜಿಲ್ಲೆಯಲ್ಲಿ ಒಟ್ಟು 12.76 ಲಕ್ಷ ಟನ್ ಮೇವು ಲಭ್ಯವಿದೆ. ಮುಂದಿನ 61 ವಾರಗಳವರೆಗೆ ಜಾನುವಾರುಗಳ ಅಗತ್ಯವನ್ನು ಪೂರೈಸಲಿದೆ. ಜಿಲ್ಲೆಯಲ್ಲಿ ಒಟ್ಟು 4.84 ಲಕ್ಷ ದೊಡ್ಡ ಜಾನುವಾರುಗಳು (ದನ ಹಾಗೂ ಎಮ್ಮೆ) ಮತ್ತು 86 ಸಾವಿರ ಸಣ್ಣ ಜಾನುವಾರುಗಳು (ಕುರಿ ಹಾಗೂ ಮೇಕೆ) ಇವೆ.


ಸಾಗರದಲ್ಲಿ 75 ವಾರಗಳು ಮೇವು ಲಭ್ಯವಿರಲಿದೆ. ಭದ್ರಾವತಿಯಲ್ಲಿ 65 ವಾರಗಳು, ಹೊಸನಗರ 61 ವಾರಗಳು, ತೀರ್ಥಹಳ್ಳಿಯಲ್ಲಿ 60 ವಾರಗಳು, ಸೊರಬದಲ್ಲಿ 59 ವಾರಗಳು, ಶಿವಮೊಗ್ಗದಲ್ಲಿ 56 ವಾರಗಳು, ಶಿಕಾರಿಪುರದಲ್ಲಿ 48 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಆದರೂ ಪರ್ಯಾಯ ಮೇವಿನ ಕುರಿತು ರೈತರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸುಮಾರು 250 ಟನ್ ಮೇವು ಉತ್ಪಾದನೆ ಮಾಡಲು 50 ಸಾವಿರ ಮೇವಿನ ಮಿನಿಕಿಟ್ಗಳನ್ನು ಸರಬರಾಜು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾಳೆಎಲೆ, ಅಡಿಕೆ ಹಾಳೆ, ಕಬ್ಬಿನ ಸಿಪ್ಪೆ ಹಾಗೂ ಮೆಕ್ಕೆಜೋಳದ ಸಿಪ್ಪೆಗಳನ್ನು ಪರ್ಯಾಯ ಮೇವಾಗಿ ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
– ಡಾ. ನಾಗರಾಜ್, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಸಂಚಾರಿ ಪಶುಚಿಕಿತ್ಸಾ ಘಟಕದ ಸಾಧನೆ
ಜೂನ್ ತಿಂಗಳಲ್ಲಿ ಸಂಚಾರಿ ಪಶುಚಿಕಿತ್ಸಾ ಘಟಕಗಳ ಮೂಲಕ ನಿಗದಿತ 630 ಪ್ರಕರಣಗಳ ಗುರಿ ಮೀರಿ, 966 ಪ್ರಕರಣಗಳಿಗೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಜಿಲ್ಲೆಯಲ್ಲಿ ತಲಾ 12 ಪೆಟ್ ಶಾಪ್ ಹಾಗೂ ಶ್ವಾನ ತಳಿ ಸಂವರ್ಧನಾ ಕೇಂದ್ರಗಳು ನೋಂದಣಿಯಾಗಿದ್ದು, ನೋಂದಣಿ ಮಾಡಿಸದವರಿಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಶಾಲೆ, ಕಾಲೇಜು ಮತ್ತು ಬಸ್ ನಿಲ್ದಾಣದಂತಹ ಆವರಣದಲ್ಲಿರುವ ಬೀದಿನಾಯಿಗಳನ್ನು ಮಾತ್ರ ಸ್ಥಳಾಂತರಿಸಿ, ಶೆಲ್ಟರ್ ಹಾಗೂ ಕಾಳಜಿ ವಹಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ರೇಖಾ, ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ. ಸುದರ್ಶನ್ ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಭಾಗವಹಿಸಿದ್ದರು.