ಶಿವಮೊಗ್ಗ: ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ನಗರದ ಜಯದೇವ ಬಡಾವಣೆಯಲ್ಲಿ ವೃದ್ಧೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಹೆಚ್.ಎಸ್. ಜಯಶ್ರೀ (76) ಎಂಬುವವರೆ ಚಿನ್ನದ ಸರ ಕಳೆದುಕೊಂಡವರು. ಜುಲೈ 31ರ ಸಂಜೆ ಜಯಶ್ರೀ ಅವರು ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬೈಕ್ನಲ್ಲಿ ನೀಲಿ ಮತ್ತು ಹಳದಿ ಬಣ್ಣದ ರೈನ್ಕೋಟ್ ಧರಿಸಿದ್ದ ಇಬ್ಬರು ಬಂದಿದ್ದು, ಜಯಶ್ರೀ ಅವರನ್ನು ಹಾದು ಮುಂದೆ ಸಾಗಿದ್ದರು. ಸ್ವಲ್ಪ ಹೊತ್ತಿನ ನಂತರ ಮತ್ತೆ ಅದೇ ಬೈಕ್ನಲ್ಲಿ ವಾಪಸ್ ಬಂದ ದುಷ್ಕರ್ಮಿಗಳು ವೃದ್ಧೆಯ ಮುಂದೆ ಬೈಕ್ ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.

ಒಬ್ಬಾತ ಬೈಕ್ನಿಂದ ಕೆಳಗಿಳಿದು ಜಯಶ್ರೀ ಅವರ ಬಳಿಗೆ ಬಂದು, ಕೊರಳಲ್ಲಿದ್ದ ಎರಡು ಎಳೆಯ ಬಂಗಾರದ ಮಾಂಗಲ್ಯ ಸರಕ್ಕೆ ಕೈಹಾಕಿ ಕಿತ್ತುಕೊಂಡಿದ್ದಾನೆ. ಈ ಸಂದರ್ಭ ಜನಶ್ರೀ ಅವರನ್ನು ತಳ್ಳಿ, ಬೈಕ್ನಲ್ಲಿ ಕಾಯುತ್ತಿದ್ದ ಮತ್ತೊಬ್ಬ ಆರೋಪಿಯೊಂದಿಗೆ ಪರಾರಿಯಾಗಿದ್ದಾನೆ. ಕಳುವಾದ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರದ ಅಂದಾಜು ಮೌಲ್ಯ ₹7,20,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.