ಶಿವಮೊಗ್ಗ: ಹಾವು ಅಥವಾ ನಾಯಿ ಕಡಿತಕ್ಕೊಳಗಾದ ತಕ್ಷಣ ಸಾರ್ವಜನಿಕರು ಮೂಢನಂಬಿಕೆಗಳಿಗೆ ಒಳಗಾಗದೆ ಸೂಕ್ತ ಪ್ರಥಮ ಚಿಕಿತ್ಸೆ ಪಡೆದು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಹಾವು ಕಡಿತ ಆಡಿಟ್, ರಾಷ್ಟ್ರೀಯ ರೇಬಿಸ್ ನಿಯಂತ್ರಣ ಸೇರಿದಂತೆ ವಿವಿಧ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲಾ ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅಗತ್ಯವಿರುವ ಜೀವ ರಕ್ಷಕ ಔಷಧಿಗಳು ಲಭ್ಯವಿರುವಂತೆ ನೋಡಿಕೊಳ್ಳಲು ಹಾಗೂ ಸಾರ್ವಜನಿಕರಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಅಂಕಿ ಅಂಶಗಳು
ನಾಯಿ ಕಡಿತ: ಜಿಲ್ಲೆಯಲ್ಲಿ ಒಟ್ಟು 13,325 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿಯಲ್ಲಿ ಅತಿ ಹೆಚ್ಚು 3,157 ಹಾಗೂ ಹೊಸನಗರದಲ್ಲಿ 1,005 ಪ್ರಕರಣಗಳು ವರದಿಯಾಗಿವೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.
ಹಾವು ಕಡಿತ: ಜಿಲ್ಲಾದ್ಯಂತ ಒಟ್ಟು 606 ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಶಿಕಾರಿಪುರದಲ್ಲಿ ಅತಿ ಹೆಚ್ಚು 141 ಪ್ರಕರಣ ದಾಖಲಾಗಿದ್ದರೆ, ಸಾಗರದಲ್ಲಿ ಅತಿ ಹೆಚ್ಚು ಅಂದರೆ 4 ಸಾವುಗಳು ವರದಿಯಾಗಿವೆ.
ವೈದ್ಯರ ಸಲಹೆ, ಮುಂಜಾಗ್ರತೆ

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್, ಪ್ರಾಣಿಗಳು ಕಡಿದ ತಕ್ಷಣ ಗಾಯವನ್ನು ಸಾಬೂನು ಮತ್ತು ಹರಿಯುವ ನೀರಿನಿಂದ 15 ನಿಮಿಷಗಳ ಕಾಲ ತೊಳೆದು ಆಸ್ಪತ್ರೆಗೆ ತೆರಳಬೇಕು. ಗಾಯಕ್ಕೆ ಮಣ್ಣು, ಸಗಣಿ ಅಥವಾ ಕಾಫಿ ಪೌಡರ್ ಹಚ್ಚಬಾರದೆಂದು.

ಹಾವು ಕಡಿತಕ್ಕೊಳಗಾದವರನ್ನು ಹೆದರಿಸದೆ, ಕಡಿದ ಭಾಗ ಅಲುಗಾಡದಂತೆ ಮಲಗಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು. ನಾಟಿ ವೈದ್ಯರ ಬಳಿ ಹೋಗಿ ಸಮಯ ಹಾಳು ಮಾಡಬಾರದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 102 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ, ಕುಡಿಯುವ ನೀರನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ, ಡಿಎಚ್ಒ ಡಾ. ನಟರಾಜ್, ಆರ್ಸಿಎಚ್ಒ ಡಾ. ಓ. ಮಲ್ಲಪ್ಪ ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.