ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಇಂದು ಸಂಜೆ ನಗರದ ವಿವಿಧೆಡೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಯಿತು.
ಡಿ.ಎ.ಆರ್ ಮೈದಾನದಿಂದ ಅಶೋಕ ವೃತ್ತ, ಎನ್.ಟಿ.ರಸ್ತೆ, ಒ.ಟಿ.ರಸ್ತೆ, ಅಮೀರ್ ಅಹಮದ್ ಸರ್ಕಲ್, ಎಂ.ಕೆ.ಕೆ ರಸ್ತೆ, ಗಾಂಧಿ ಬಜಾರ್ ಮೂಲಕ ಕೋಟೆ ಪೊಲೀಸ್ ಠಾಣೆವರೆಗೆ ರೂಟ್ ಮಾರ್ಚ್ ನಡೆಯಿತು. ಸಿವಿಲ್ ಪೊಲೀಸ್, ಸಶಸ್ತ್ರ ಮೀಸಲು ಪಡೆ, ಆರ್.ಎ.ಎಫ್, ಎಸ್.ಎ.ಎಫ್, ಹೋಂ ಗಾರ್ಡ್ಸ್ ಸಿಬ್ಬಂದಿ ರೂಟ್ ಮಾರ್ಚ್ನಲ್ಲಿ ಪಾಲ್ಗೊಂಡಿದ್ದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ನಗರದಲ್ಲಿ ಬಿಗಿ ಬಂದೋಬಸ್ತ್
ಇನ್ನು, ಈದ್ ಮಿಲಾದ್ ಹಬ್ಬದ ಸಂದರ್ಭ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ, 3000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. 12 ಕೆಎಸ್ಆರ್ಪಿ ತುಕಡಿ, 1 ಆರ್ಎಎಫ್, 1 ಎಸ್ಎಎಫ್, 21 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಇನ್ನು, 36 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈದ್ ಮಿಲಾದ್ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಸಿದ್ಧತೆ ನಡೆಸಲಾಗಿದೆ. ವಿವಿಧೆಡೆ ಸಭೆಗಳನ್ನು ನಡೆಸಲಾಗಿದೆ. ವಿವಿಧ ಸಮುದಾಯಗಳ ಕುಂದುಕೊರತೆ ಆಲಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 13 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಅಪರಾಧಿಕ ಹಿನ್ನೆಲೆ ಇರುವ 312 ಮಂದಿಗೆ ನಿಗಾ ವಹಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದ ಕದಡುವವರ ವಿರುದ್ಧ ತಕ್ಷಣವೇ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಚ್ಚರಿಕೆ ನೀಡಿದರು.