ಸಾಗರ: ಬಿದರೂರು ಚಾನೆಲ್ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ತುಮಕೂರು ಮೂಲದ ಯುವತಿಯು ಸ್ನೇಹಿತೆಯ ಜೊತೆಗೆ ಜೋಗ ಜಲಪಾತಕ್ಕೆ ಬಂದಿದ್ದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೀನು ಹಿಡಿಯುತ್ತಿದ್ದವರಿಂದ ಮಾಹಿತಿ
ಬುಧವಾರ ಸಂಜೆ ಬಿದರೂರು ಚಾನೆಲ್ ಬಳಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಮೀನು ಹಿಡಿಯುತ್ತಿದ್ದವರು ಗಮನಿಸಿದ್ದರು. ಕೂಡಲೆ ಕಾರ್ಗಲ್ ಪೊಲೀಸ್ ಠಾಣೆ ಮತ್ತು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದೇಕೆ?
ಪೊಲೀಸರು ಯುವತಿಯನ್ನು ರಕ್ಷಿಸಿ ಠಾಣೆಗೆ ಕರೆತಂದಿದು ವಿಚಾರಣೆ ನಡೆಸಿದರು. ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆಕೆ ತಿಳಿಸಿದ್ದಾಳೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಆಕೆಯ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿ, ಆಕೆಯನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ.

ಯುವತಿಯನ್ನು ರಕ್ಷಿಸಿದ ಇಆರ್ವಿ ಅಧಿಕಾರಿ ಅಣ್ಣಪ್ಪ, ಚಾಲಕ ರಾಘವೇಂದ್ರ, ಕಾರ್ಗಲ್ ಪೊಲೀಸ್ ಠಾಣೆಯ ಸಿಬ್ಬಂದಿ ಸಂದೀಪ್ ಮತ್ತು ಪುರುಷೋತ್ತಮ್ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.