ಶಿವಮೊಗ್ಗ: ಅಂಗವಿಕಲರ ಪಿಂಚಣಿ ಮಂಜೂರು ಮಾಡಲು ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಉಪತಹಸೀಲ್ದಾರ್ಗೆ ಶಿವಮೊಗ್ಗ ನ್ಯಾಯಾಲಯವು ನಾಲ್ಕು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಭದ್ರಾವತಿ ತಾಲ್ಲೂಕಿನ ಡಿ.ಬಿ ಹಳ್ಳಿಯ ಗಿರೀಶ್ ಎಂಬುವವರ ತಂದೆ ಹುಟ್ಟು ಮೂಕರಾಗಿದ್ದಾರೆ. ಆದ್ದರಿಂದ ಅಂಗವಿಕಲರ ವೇತನ ಪಡೆಯಲು ಹೊಳೆಹೊನ್ನೂರು ಹೋಬಳಿಯ ಕಲ್ಲಿಹಾಳ್ ನಾಡಕಚೇರಿ ಉಪತಹಸೀಲ್ದಾರ್ ಪುಷ್ಪಲತಾ ಅವರನ್ನು ಭೇಟಿಯಾಗಿದ್ದರು. ಆಗ ಪುಷ್ಪಲತಾ ಪಿಂಚಣಿ ನೀಡಲು ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗಿರೀಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
2017ರ ಸೆಪ್ಟೆಂಬರ್ 21ರಂದು ಭದ್ರಾವತಿ ತಾಲ್ಲೂಕು ಕಛೇರಿಯಲ್ಲಿ ₹5000 ಲಂಚ ಸ್ವೀಕರಿಸುತ್ತಿದ್ದಾಗ ಉಪ ತಹಶೀಲ್ದಾರ್ ಪುಷ್ಪಲತಾ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈ ಸಂಬಂಧ ತನಿಖೆ ನಡೆಸಿದ ಇನ್ಸ್ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ನಾಲ್ಕು ವರ್ಷ ಜೈಲು, ದಂಡ
ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶರು ಉಪ ತಹಶೀಲ್ದಾರ್ ಪುಷ್ಪಲತಾಗೆ 4 ವರ್ಷ ಜೈಲು ಹಾಗೂ ₹40,000 ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರ್ ರಾಜ್ ವಾದ ಮಂಡಿಸಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.