ಸಾಗರ: ರಂಗ ನಿರ್ದೇಶಕ ಹಾಗೂ ನೀನಾಸಂ ರಂಗ ಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ ಚಿದಂಬರ ರಾವ್ ಜಂಬೆ (77) ಹೆಗ್ಗೋಡಿನಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದಲ್ಲಿ ನಡೆಯಲಿದೆ.
ಚಿದಂಬರ ರಾವ್ ಜಂಬೆ ಕುರಿತ ಪ್ರಮುಖಾಂಶ

ಸಾಗರ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ 1949ರಲ್ಲಿ ಜನಿಸಿದ ಚಿದಂಬರ ರಾವ್ ಜಂಬೆ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ್ದರು.


ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದರು. 1982ರಿಂದ 2004ರವರೆಗೆ ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಹಲವು ರಂಗಕರ್ಮಿಗಳನ್ನು ರೂಪಿಸಿದ್ದರು. ನಂತರ ಮೈಸೂರು ರಂಗಾಯಣ ನಿರ್ದೇಶಕರಾಗಿ, ಸಾಣೇಹಳ್ಳಿ ಹಾಗೂ ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಾಯದಲ್ಲಿ ಸೇವೆ ಸಲ್ಲಿಸಿದ್ದರು. ದೇಶದ ಹಲವು ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದರು. ದೇಶಾದ್ಯಂತ ಶಿಷ್ಯರಿದ್ದಾರೆ.

ತಲೆದಂಡ, ಭಾಸ ಭಾರತ, ಚಿರೇಬಂಡಿವಾಡೆ, ಕತ್ತಲೆಗೆ ಹತ್ತು ತಲೆ, ಲೋಕ ಶಾಕುಂತಲ, ತ್ರಿವಳಿ ಸಹೋದರಿಯರು, ಆಮನಿ ಹಾಗೂ ಶರ್ಮಿಷ್ಟೆ ಸೇರಿದಂತೆ ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. ಪತ್ನಿ, ಓರ್ವ ಪುತ್ರ ಹಾಗೂ ಶಿಷ್ಯ ಬಳಗವನ್ನು ಅವರು ಅಗಲಿದ್ದಾರೆ.
ದೇಶದ ಅನೇಕ ಪ್ರಖ್ಯಾತ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದರು. ಗಾಂಧಿವಾದಿಯಾಗಿ ಬದುಕು ಸಾಗಿಸಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ದರು. ನಮ್ಮ ಜಿಲ್ಲೆಯ ಆಗು-ಹೋಗುಗಳಿಗೆ ಸ್ಪಂದಿಸುತ್ತಾ, ನೆಲದ ಸಾಕ್ಷಿಪ್ರಜ್ಞೆಯಂತಿದ್ದರು.
– ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಗಣ್ಯರಿಂದ ಅಂತಿಮ ದರ್ಶನ
ಶಾಸಕ ಗೋಪಾಲಕೃಷ್ಣ ಬೇಳೂರು, ರಂಗಕರ್ಮಿಗಳಾದ ಕೆ.ಜಿ. ಕೃಷ್ಣಮೂರ್ತಿ, ಕೆ.ಜಿ. ಮಹಾಬಲೇಶ್ವರ, ಪುರುಷೋತ್ತಮ ತಲವಾಟ, ದೇವರು ಭಟ್, ಕೆ.ವಿ. ಅಕ್ಷರ, ವಿಮರ್ಶಕ ಟಿ.ಪಿ. ಅಶೋಕ್, ನಿವೃತ್ತ ಪ್ರಾಧ್ಯಾಪಕ ಜಸ್ವಂತ್ ಜಾಧವ್ ಹಾಗೂ ಪತ್ರಕರ್ತ ಶ್ರೀಧರ ಭಾಗವತ್ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು
