ರೈಲ್ವೆ ಸುದ್ದಿ: ರೈಲ್ವೆ ಹಳಿ ಮೇಲೆ ಮರ ಬಿದ್ದ ಹಿನ್ನೆಲೆ ತಾಳಗುಪ್ಪ – ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಮೂರು ಗಂಟೆಗು ಹೆಚ್ಚು ಹೊತ್ತಿನಿಂದ ಹೆಚ್ಚು ಮಾರ್ಗ ಮಧ್ಯೆ ನಿಂತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಅರಸಾಳು ರೈಲ್ವೆ ನಿಲ್ದಾಣದ ಸಮೀಪ ರೈಲ್ವೆ ಹಳಿ ಮತ್ತು ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ. ಹಾಗಾಗಿ ಈ ಮಾರ್ಗದ ರೈಲು ಸಂಚಾರಕ್ಕೆ ಸಮಸ್ಯೆಯಾಗಿದೆ. ವಿಷಯ ತಿಳಿದು ರೈಲ್ವೆ ಇಂಜಿನಿಯರ್ಗಳು, ಸಿಬ್ಬಂದಿ, ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ರಪೇರಿ ಕಾರ್ಯ ನಡೆಸುತ್ತಿದ್ದಾರೆ.

ಮೂರು ಗಂಟೆಯಿಂದ ನಿಂತ ರೈಲು
ತಾಳುಗುಪ್ಪ – ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 20652) ರೈಲು ಇಂದು ಬೆಳಿಗ್ಗೆ 5:20ಕ್ಕೆ ತಾಳಗುಪ್ಪದಿಂದ ಹೊರಟಿತ್ತು. ಬೆಳಗ್ಗೆ 6:18ಕ್ಕೆ ಆನಂದಪುರದಿಂದ ಹೊರಟ ರೈಲು ಮಾರ್ಗ ಮಧ್ಯೆ ನಿಂತಿದೆ. ಕೆಂಚನಾಳ ಹಾಲ್ಟ್ ಭಾಗದಲ್ಲಿ ನಿಂತಿದೆ. ಕೆಲವೇ ಹೊತ್ತಿಗೆ ರಿಪೇರಿ ಪೂರ್ಣಗೊಂಡು ರೈಲು ಪ್ರಯಾಣ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ.
ಡಿಸೇಲ್ ಇಂಜಿನ್ ಜೋಡಣೆ
ವಿದ್ಯುತ್ ತಂತಿಗಳ ರಿಪೇರಿ ಕಾರ್ಯಕ್ಕೆ ಮತ್ತಷ್ಟು ಸಮಯ ಹಿಡಿಯುವ ಹಿನ್ನೆಲೆ ಈಗ ರೈಲಿಗೆ ಡಿಸೇಜ್ ಇಂಜಿನ್ ಜೋಡಿಸುವ ಕಾರ್ಯ ನಡೆಯುತ್ತಿದೆ. ಸ್ವಲ್ಪ ದೂರದ ತನಕ ಡಿಸೇಲ್ ಇಂಜಿನ್ ಮೂಲಕವೇ ರೈಲು ಸಂಚರಿಸಲಿದೆ. ಆನಂತರ ಪುನಃ ಎಲೆಕ್ಟ್ರಿಕ್ ಇಂಜಿನ್ ಬಳಸಲು ಯೋಜಿಸಲಾಗಿದೆ.
ಪ್ರಯಾಣಿಕರ ಪರದಾಟ
ಸಾಲು ಸಾಲು ರಜೆ, ಗಣೇಶ ಚತುರ್ಥಿ ಹಿನ್ನೆಲೆ ಊರಿಗೆ ಬಂದಿದ್ದವರು ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಆದರೆ ಮರ ಬಿದ್ದು ಸತತ ಮೂರು ಗಂಟೆಗೆ ಹೆಚ್ಚು ಹೊತ್ತಿನಿಂದ ರೈಲು ಮಾರ್ಗ ಮಧ್ಯೆ ನಿಂತಿದೆ. ಇದರಿಂದ ರೈಲಿನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಶಿವಮೊಗ್ಗ, ಭದ್ರಾವತಿ ನಿಲ್ದಾಣಗಳಲ್ಲಿಯು ದೊಡ್ಡ ಸಂಖ್ಯೆಯ ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದಾರೆ. ಕೆಲವರು ಮನೆಗೆ ಹಿಂತಿರುಗಿದರೆ, ಇನ್ನೂ ಕೆಲವರು ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ಮತ್ತಷ್ಟು ಪ್ರಯಾಣೀಕರು ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ.
ಈ ರೈಲು ಬೆಳಿಗ್ಗೆ 5:20ಕ್ಕೆ ತಾಳಗುಪ್ಪದಿಂದ ಹೊರಟು 5:35ಕ್ಕೆ ಸಾಗರ, ಬೆಳಿಗ್ಗೆ 7:05ಕ್ಕೆ ಶಿವಮೊಗ್ಗ, ಬೆಳಿಗ್ಗೆ 7:28ಕ್ಕೆ ಭದ್ರಾವತಿ ನಿಲ್ದಾಣಕ್ಕೆ ತಲುಪುತಿತ್ತು. ಮಧ್ಯಾಹ್ನ 12ಕ್ಕೆ ಬೆಂಗಳೂರಿಗೆ ತಲುಪುತಿತ್ತು.