ಶಿವಮೊಗ್ಗ : ಹಂದಿ (Pig) ವಿಚಾರವಾಗಿ ಇಬ್ಬರು ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ.
ಶಿವಮೊಗ್ಗದ ಗೋಪಾಳದ ಕೆಹೆಚ್ಬಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ಅರ್ಜುನ್ ಮತ್ತು ಮಂಜುನಾಥ್ ಮಧ್ಯೆ ಗಲಾಟೆಯಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಜುನ್ ದೂರಿನಲ್ಲಿ ಏನಿದೆ?
ತಮ್ಮ ಪುತ್ರನನ್ನು ಶಾಲೆಯಿಂದ ಕರೆತರಲು ಬೈಕಿನಲ್ಲಿ ಹೋಗುತ್ತಿದ್ದಾಗ ನಾಲ್ವರು ಯುವಕರು ಹಂದಿ ಕಳ್ಳತನ ಮಾಡುತ್ತಿದ್ದರು. ಬೈಕ್ ನಿಲ್ಲಿಸಿ ತಮ್ಮ ಹಂದಿಗಳನ್ನು ಯಾಕೆ ಕಳ್ಳತನ ಮಾಡುತ್ತಿದ್ದೀರ ಎಂದು ಪ್ರಶ್ನಿಸಿದಾಗ ನಾಲ್ವರು ಯುವಕರು ಅಲ್ಲಿಂದ ಓಡಿ ಹೋಗಿದ್ದಾರೆ. ಮಂಜುನಾಥ ಎಂಬಾತ ತನ್ನ ಬಳಿ ಬಂದು ಮಚ್ಚು ಮತ್ತು ರಿಪೀಸಿನಿಂದ ತಲೆಗೆ ಹೊಡೆದಿದ್ದಾನೆ. ತಾನು ಪ್ರಜ್ಞಾಹೀನನಾಗಿ ಬಿದ್ದಿದ್ದೆ. ಬಳಿಕ ತಮ್ಮ ತಂದೆ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಆರೋಪಿಸಿ ಅರ್ಜುನ್ ದೂರು ನೀಡಿದ್ದಾನೆ.
ಮಂಜುನಾಥನಿಂದ ಪ್ರತಿ ದೂರು
ಇದಕ್ಕೆ ಮಂಜುನಾಥ್ ಪ್ರತಿದೂರು ನೀಡಿದ್ದಾನೆ. ತಾನು ಹಂದಿ ಸಾಕಾಣಿಕೆ ಮಾಡುತ್ತಿದ್ದು, ಹಂದಿಗಳನ್ನು ನೋಡಲು ಗೋಪಾಳಕ್ಕೆ ಹೋದಾಗ ಘಟನೆ ನಡೆದಿದೆ. ತಾನು ಹಂದಿಗಳನ್ನು ನೋಡುತ್ತಿದ್ದಾಗ ಅರ್ಜುನ್ ಸ್ಥಳಕ್ಕೆ ಬಂದಿದ್ದ. ‘ನಮ್ಮ ಏರಿಯಾಗೆ ಏಕೆ ಬಂದಿದ್ದೀಯ’ ಎಂದು ಪ್ರಶ್ನಿಸಿದ್ದ. ಆಗ ತಾನು ‘ನಮ್ಮ ಐದು ಹಂದಿಗಳನ್ನು ಹಿಡಿದುಕೊಂಡು ಹೋಗಿದ್ದೇಕೆʼ ಎಂದು ವಿಚಾರಿಸಿದ್ದೆ. ಅದಕ್ಕೆ ಅರ್ಜುನ್, ‘ಇನ್ನಷ್ಟು ಹಂದಿಗಳನ್ನು ಹೊಡೆದುಕೊಂಡು ಹೋಗುತ್ತೇನೆʼ ಎಂದು ಬೆದರಿಸಿದ್ದ. ಕೊನೆಗೆ ರಿಪೀಸ್ನಿಂದ ಹಲ್ಲೆ ನಡೆಸಿದ್ದಾನೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ಮಂಜುನಾಥ್ ದೂರು ನೀಡಿದ್ದಾನೆ.
ಘಟನೆ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ದುಬೈನಿಂದ ಶಿವಮೊಗ್ಗಕ್ಕೆ ಮರಳಿದ ಕುಟುಂಬಕ್ಕೆ ಕಾದಿತ್ತು ಆಘಾತ, ಆಗಿದ್ದೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200