ಶಿವಮೊಗ್ಗ: ಕಳೆದ ಆರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು (suspect) ಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ವೆಂಕಟೇಶ್ ನಗರದ ನಿವಾಸಿ ಜಾನ್ ಭರತ್ (30) ಬಂಧಿತ ಆರೋಪಿ. ಈತನ ವಿರುದ್ಧ 2019ರಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಿದ್ಧತೆ (ಐಪಿಸಿ ಕಲಂ 399) ಮತ್ತು ದರೋಡೆ ಮಾಡುವ ಉದ್ದೇಶದಿಂದ ಗುಂಪು ಸೇರುವುದು (ಐಪಿಸಿ 402) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ, ಕಳೆದ 6 ವರ್ಷಗಳಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದನು.

ಇದನ್ನೂ ಓದಿ : ತಾಳಗುಪ್ಪ ಇಂಟರ್ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್, ಆಗಿದ್ದೇನು?
ಆರೋಪಿಯ ವಿರುದ್ಧ ಶಿವಮೊಗ್ಗದ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ರವಿಪಾಟೀಲ್ ಅವರ ನೇತೃತ್ವದಲ್ಲಿ ಪಿಎಸ್ಐ ಕೋಮಲಾ, ಹೆಚ್.ಸಿ ಚಂದ್ರು ಮತ್ತು ಪಿ.ಸಿ ಗಣೇಶ್ ಅವರ ತಂಡವು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದೆ. ಏಪ್ರಿಲ್ 11ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.